ತುಮಕೂರು: ‘ಜೆಡಿಎಸ್– ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಅವರು ತಾಯಿನಾಡು ಬಿಟ್ಟು ಬಂದ ವಲಸೆ ಅಭ್ಯರ್ಥಿಯಾಗಿದ್ದು, ಅವರಿಗೆ ಬೆಂಬಲಿಸಿದರೆ ನಿಮಗೇನೂ ಪ್ರಯೋಜನವಾಗದು. ನಾನು ಇಲ್ಲಿಯೇ ಜನಿಸಿದವ. ನಿಮ್ಮ ಸೇವೆಯನ್ನೇ ಮಾಡಿಕೊಂಡು ಬಂದವನಾಗಿದ್ದು, ನನನ್ನು ಬೆಂಬಲಿಸಬೇಕು’ ಎಂದು ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್ ಹೇಳಿದರು.
ತಾಲ್ಲೂಕಿನ ಊರ್ಡಿಗೆರೆ ಗ್ರಾಮದಲ್ಲಿ ಲೋಕಸಭಾ ಚುನಾವಣಾ ಪ್ರಯುಕ್ತ ನಡೆದ ರೋಡ್ ಶೋದಲ್ಲಿ ಮಾತನಾಡಿದರು.
’ಈ ಕ್ಷೇತ್ರದ ಜನರ ಸಮಸ್ಯೆ ಏನು, ಏನು ಅಭಿವೃದ್ಧಿ ಯೋಜನೆ ಕೈಗೊಳ್ಳಬೇಕು ಎಂಬುದು ನನಗೆ ಗೊತ್ತಿದೆ. ವಲಸೆ ಬಂದವರು ಎಷ್ಟು ದಿನ ಇರುತ್ತಾರೆ. ಯಾವುದೇ ಕಾರಣಕ್ಕೂ ಅವರನ್ನು ಬೆಂಬಲಿಸಬೇಡಿ’ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಬಿ.ಸುರೇಶ್ಗೌಡ ಮಾತನಾಡಿ, ‘87 ವಯಸ್ಸಿನ ದೇವೇಗೌಡರಿಗೆ ಅಧಿಕಾರದ ದುರಾಸೆ ಹೆಚ್ಚಾಗಿದೆ. ಮೊಮ್ಮಕ್ಕಳಿಗಾಗಿ ಕ್ಷೇತ್ರ ತೊರೆದು ಬಂದು ತುಮಕೂರು ಕ್ಷೇತ್ರಕ್ಕೆ ಬಂದು ಸ್ಪರ್ಧಿಸಿದ್ದಾರೆ. ಅವರಿಗೆ ಅಧಿಕಾರ ಮುಖ್ಯವೇ ಹೊರತು ಈ ಕ್ಷೇತ್ರದ ಜನರ ಹಿತ ಅಲ್ಲ. ಯಾವುದೇ ಕಾರಣಕ್ಕೂ ಅವರನ್ನು ಬೆಂಬಲಿಸಬಾರದು’ ಎಂದು ಹೇಳಿದರು.
’ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್ ಅವರಾದರೂ ನಾನೇ ಅಭ್ಯರ್ಥಿ ಎಂದು ತಿಳಿದು ಬಿಜೆಪಿ ಬೆಂಬಲಿಸಬೇಕು’ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಸ್ತುವಾರಿ ವಿ.ಸೋಮಣ್ಣ ಮಾತನಾಡಿ, ‘ಈ ಕ್ಷೇತ್ರದ ಅಭ್ಯರ್ಥಿ ಜಿ.ಎಸ್. ಬಸವರಾಜ್ ಗೆಲ್ಲುವುದರಲ್ಲಿ ಅನುಮಾನಗಳಿಲ್ಲ. ನೀವು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಬಿ.ಸುರೇಶ್ಗೌಡ, ಜಿಲ್ಲಾ ಉಸ್ತುವಾರಿ ವಿ.ಸೋಮಣ್ಣ, ಜಿ.ಎಸ್.ಬಸವರಾಜ್, ವೈ.ಎಚ್. ಹುಚ್ಚಯ್ಯ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಬಿ.ಸುಮಿತ್ರಾದೇವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ, ಎಪಿಎಂಸಿ ಮಾಜಿ ಅಧ್ಯಕ್ಷ ಓಂ ನಮೋ ನಾರಾಯಣ, ಪ್ರಭಾಕರ್ ಇದ್ದರು.