ತುಮಕೂರು: ಬೌದ್ಧ ಧರ್ಮದಲ್ಲಿ ಸಮಾನತೆ ಇದೆ. ಬುದ್ಧ ತೋರಿದ ಮಾರ್ಗದಲ್ಲಿ ಅರಿವಿನೆಡೆಗೆ ನಾವು ನಡೆಯಬೇಕು ಎಂದು ಜನಾಂದೋಲನಾ-ಕರ್ನಾಟಕದ ಸಂಘಟನೆ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ತಿಳಿಸಿದರು.
ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ದೀಪಾವಳಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೌದ್ಧಧರ್ಮದ ಉಗಮ ಕಾಲದಲ್ಲಿ ಯಾವುದೇ ಜಾತಿ, ಧರ್ಮ, ಲಿಂಗ ತಾರತಮ್ಯ ಇರಲಿಲ್ಲ. ಎಲ್ಲ ಸಮಾನರಾಗಿದ್ದರು. ನಾಗ ಸಂಸ್ಕೃತಿಯಲ್ಲಿ ಮೂಲ ನಿವಾಸಿಗಳು ಆಳುತ್ತಿದ್ದರು. ಕ್ರಮೇಣ ವೈದಿಕ ಮನಸ್ಸುಗಳು ಈ ಸಂಸ್ಕೃತಿಯ ರಾಜ ಮತ್ತು ರಾಜ್ಯವನ್ನು ವಂಚಿಸಿದರು. ಅಸಮಾನತೆಯಿಂದ ಕೂಡಿದ ರಾಜ್ಯ ಸ್ಥಾಪನೆ ಮಾಡಿದರು ಎಂದರು.
ಸಾಮ್ರಾಟ್ ಅಶೋಕ ಕಳಿಂಗ ಯುದ್ಧದ ನಂತರ ಯುದ್ಧ ತ್ಯಜಿಸಿದ. ಶಾಂತಿ, ಅಹಿಂಸೆ ಮತ್ತು ಸಹಬಾಳ್ವೆಗಾಗಿ ವಿಜಯದಶಮಿ ಹಬ್ಬ ಆಚರಿಸಲಾಗುತ್ತಿತ್ತು. ಆದರೆ ಇಂದು ಮೂಲ ನಿವಾಸಿಗಳ ಹಬ್ಬಗಳನ್ನು ಬ್ರಾಹ್ಮಣ್ಯೀಕರಣಗೊಳಿಸಲಾಗಿದೆ. ಆದ್ದರಿಂದ ನಮ್ಮ ಇತಿಹಾಸ ತಿಳಿಯುವ ಮೂಲಕ ಆಚರಣೆಗಳನ್ನು ಮರು ಸ್ಥಾಪಿಸುವ ಅಗತ್ಯ ಇದೆ ಎಂದು ತಿಳಿಸಿದರು.
ಸಮಿತಿಯ ಪದಾಧಿಕಾರಿಗಳಾದ ದೀಪಿಕಾ, ಶೆಟ್ಟಾಳಯ್ಯ, ಕಣ್ಣನ್, ಶಂಕರ್, ಅರುಣ್, ಗಂಗಮ್ಮ, ಮೊಹಮ್ಮದ್ ಹಯಾತ್, ರಂಗನಾಥ್, ಜಬೀರಾ, ಚಕ್ರಪಾಣಿ, ಮುರಗ, ಕೃಷ್ಣ, ಸಿದ್ದಪ್ಪ, ರಂಗನಾಥ್, ಮಾರಿಮುತ್ತು, ವೇಣು ಇದ್ದರು.