ತುಮಕೂರು: ಬೆಳಗಾವಿಯ ಪೀರನವಾಡಿ ವೃತ್ತದಲ್ಲಿ ಸ್ಥಾಪಿಸಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವುಗೊಳಿಸಿರುವುದನ್ನು ವಿರೋಧಿಸಿ ಹಾಗೂ ಅದೇ ಸ್ಥಳದಲ್ಲಿ ಪ್ರತಿಮೆ ಮರುಸ್ಥಾಪನೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.
ಕಿತ್ತೂರನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಲು ತನ್ನ ಕೊನೆಯ ಉಸಿರು ಇರುವವರೆಗೂ ಸಂಗೊಳ್ಳಿ ರಾಯಣ್ಣ ಹೋರಾಟ ನಡೆಸಿದ್ದರು. ಅಂತಹ ಮಹಾನ್ ನಾಯಕನ ಪ್ರತಿಮೆಯನ್ನು ಪೊಲೀಸರು ತೆರವುಗಳಿಸಿರುವುದನ್ನು ಒಕ್ಕೂಟದ ಅಧ್ಯಕ್ಷ ಎಸ್.ಶಂಕರ್ ಖಂಡಿಸಿದರು.
ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಯಿಂದ ಈವರೆಗೂ ಯಾರಿಗೂ ಯಾವ ರೀತಿಯಲ್ಲೂ ತೊಂದರೆ ಆಗಿರಲಿಲ್ಲ. ಶಾಂತಿ, ಸೌಹಾರ್ದಕ್ಕೆ ಧಕ್ಕೆ ಬಂದಿರಲಿಲ್ಲ. ಆದರೆ ಏಕಾಏಕಿ ಪ್ರತಿಮೆ ತೆರವುಗೊಳಿಸಿರುವುದು ಕನ್ನಡ ನಾಡಿನ ಸ್ವಾತಂತ್ರ್ಯ ಹೊರಾಟಗಾರರಿಗೆ ಮಾಡಿದ ಅವಮಾನವಾಗಿದೆ. ಹಲವರು ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿದರೂ ಪ್ರತಿಮೆ ಸ್ಥಾಪಿಸಿಲ್ಲ. ತಕ್ಷಣ ಪ್ರತಿಮೆ ಸ್ಥಾಪಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೇಳಿದರು.
ರಾಜ್ಯ ಕುರುಬರ ಸಂಘದ ನಿರ್ದೇಶಕ ಟಿ.ಇ.ರಘುರಾಮ್, ಸೋಮಶೇಖರ್, ಅರುಣ್ ಕುಮಾರ್, ಚೇತನ್, ಯಲ್ಲೇಶಗೌಡ, ಚಂದನ್, ಉದಯ, ಪ್ರವೀಣ್, ಯತೀಶ್, ನೇತಾಜಿ ಶ್ರೀಧರ್, ಪ್ರಸನ್ನ ಭಾಗವಹಿಸಿದ್ದರು.