ಬೆಂಗಳೂರು: ‘ಕೋಮುವಾದ ವಿರೋಧಿಸಿ ಸಂವಿಧಾನ ರಕ್ಷಿಸುವುದೆಂದರೆ ಮತ್ತೊಂದು ಪಕ್ಷದ ಪರ ನಿಲ್ಲುವುದಲ್ಲ’ ಎಂದು ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟರು.
ಸಂವಿಧಾನ ರಕ್ಷಿಸಿ ವೇದಿಕೆ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಸಂವಿಧಾನ ರಕ್ಷಿಸಿ–ಪ್ರಜಾಪ್ರಭುತ್ವ ಉಳಿಸಿ’ ದುಂಡುಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.
‘ಸಂವಿಧಾನ ಬದಲಿಸಬೇಕು ಎಂಬ ಅಭಿಪ್ರಾಯಗಳು ಬರುತ್ತಿರುವುದು ಗಂಭೀರವಾದ ವಿಷಯ. ಅದನ್ನು ನಾನು ಖಂಡಿಸುತ್ತೇನೆ’ ಎಂದರು.
ಸಂವಿಧಾನದ ಚೌಕಟ್ಟಿನಲ್ಲಿ ರಾಜಕೀಯ ಇರಬೇಕೇ ಹೊರತು ಧಾರ್ಮಿಕ ತಳಹದಿಯ ಮೇಲೆ ರಾಜಕೀಯ ಇರಬಾರದು. ಆದರೆ, ಧರ್ಮದ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಪಿ. ಕೋದಂಡರಾಮಯ್ಯ, ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಭಿನ್ನ ಅಭಿಪ್ರಾಯಗಳನ್ನು ಹತ್ತಿಕ್ಕಲಾಗುತ್ತಿದೆ. ಅಘೋಷಿತ ತುರ್ತು ಪರಿಸ್ಥಿತಿ ಇದ್ದು, ಇದರ ವಿರುದ್ಧ ಹೋರಾಟ ರೂಪಿಸಬೇಕಿದೆ ಎಂದರು.
ರಾಜಭವನಕ್ಕೆ ರ್ಯಾಲಿ
ಕೋಮುವಾದದ ವಿರುದ್ಧ ಮತ್ತು ಸಂವಿಧಾನದ ರಕ್ಷಣೆಗಾಗಿ ಇದೇ 24ರಂದು ನಗರದಲ್ಲಿ ರ್ಯಾಲಿ ನಡೆಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಗಾಂಧಿ ಉದ್ಯಾನದಿಂದ ರಾಜಭವನದ ತನಕ ಮೌನ ಮೆರವಣಿಗೆ ನಡೆಸಿ ರಾಜ್ಯಪಾಲರಿಗೆ ಮನವಿ ಪತ್ರ ನೀಡಲಾಗುವುದು. ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಯಿತು ಎಂದು ಪಿ. ಕೋದಂಡರಾಮಯ್ಯ ತಿಳಿಸಿದರು.