ತುಮಕೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಜನವಿರೋಧಿ ನೀತಿ– ನಡೆಗಳ ವಿರುದ್ಧ ದೇಶವ್ಯಾಪಿ ಆ. 28ರ ವರೆಗೆ ಹಮ್ಮಿಕೊಂಡಿರುವ ಪ್ರತಿಭಟನೆ ಭಾಗವಾಗಿ ಭಾರತಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ನಗರದಲ್ಲಿ ಪ್ರಚಾರಾಂದೋಲನ ನಡೆಸಿತು.
ಬಿ.ಜಿ.ಪಾಳ್ಯ ವೃತ್ತ, ಗುಬ್ಬಿ ಗೇಟ್ನಲ್ಲಿ ಸರ್ಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ನೀತಿಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ, ‘ಬಡ ಕುಟುಂಬಗಳಿಗೆ ಮುಂದಿನ ಆರು ತಿಂಗಳವರೆಗೆ ಮಾಸಿಕ ₹7,500 ನಗದು ವರ್ಗಾವಣೆ ಮಾಡಬೇಕು. ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸಬೇಕು’ ಎಂದು ಆಗ್ರಹಿಸಿದರು.
ಈಗಿರುವ ಕಾನೂನುಗಳನ್ನು ರದ್ದುಪಡಿಸಿ, ತಿದ್ದುಪಡಿ, ಅಮಾನತು ಮಾಡುವ ಪ್ರಸ್ತಾವ ಹಿಂತೆಗೆದುಕೊಳ್ಳಬೇಕು. ರೈಲ್ವೆ, ವಿದ್ಯುತ್, ಪೆಟ್ರೋಲಿಯಂ, ಕಲ್ಲಿದ್ದಲು, ಬ್ಯಾಂಕ್, ವಿಮೆ, ರಕ್ಷಣಾ ಉತ್ಪಾದನಾ ವಲಯಗಳಲ್ಲಿನ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದರು.
ಸಿಪಿಎಂ ಮುಖಂಡ ಷಣ್ಮುಖಪ್ಪ, ‘ವಲಸೆ ಕೆಲಸಗಾರರ ಕಾಯ್ದೆ ತೆಗೆದುಹಾಕುವ ಪ್ರಸ್ತಾವ ರದ್ದುಮಾಡಿ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಬೇಕು. ಪಿಎಂ ಕೇರ್ ನಿಧಿಯನ್ನು ಕೊರೊನಾ ಸೋಂಕು ಎದುರಿಸಲು ರಾಜ್ಯಗಳಿಗೆ ವರ್ಗಾಯಿಸಬೇಕು’ ಎಂದು ಒತ್ತಾಯಿಸಿದರು.
ಸಿಪಿಎಂ ನಗರ ಕಾರ್ಯದರ್ಶಿ ಎಸ್.ರಾಘವೇಂದ್ರ, ಮುಖಂಡರಾದ ಲೋಕೇಶ್, ಖಲೀಲ್, ಲಕ್ಷ್ಮಿಕಾಂತ ಇದ್ದರು.