ತುಮಕೂರು: ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದ ಪ್ರಯುಕ್ತ ನಗರದ ಸಿದ್ಧಗಂಗಾ ಮಠದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ಯರು ಗುರುವಾರ ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಹಸುವಿಗೆ ಪೂಜೆ ಸಲ್ಲಿಸಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶ್ಗೌಡ, ಅಕ್ಕಿ, ಬೆಲ್ಲ ಹಾಗೂ ಬಾಳೆಹಣ್ಣು ತಿನ್ನಿಸಿದರು.
‘ಬಿಜೆಪಿಯು ಗೋ ಹತ್ಯೆ ನಿಷೇಧದ ವಿಷಯವನ್ನು ರಾಷ್ಟ್ರ ಮಟ್ಟದಲ್ಲಿ ಪ್ರಸ್ತಾಪಿಸಿತ್ತು. ಈಗ ಅದು ಈಡೇರುತ್ತಿದೆ. ಕಾಯ್ದೆ ಜಾರಿಗೆ ಕಾರಣರಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಶಾಸಕರನ್ನು ಅಭಿನಂದಿಸಲಾಗುವುದು’ ಎಂದು ಸುರೇಶ್ಗೌಡ ತಿಳಿಸಿದರು.
ಒಂದು ಹಸುವನ್ನು ಇಟ್ಟುಕೊಂಡು ಒಂದು ಕುಟುಂಬ ಜೀವನ ಸಾಗಿಸಬಹುದು. ಅದರ ಉತ್ಪನ್ನಗಳು ರೈತರ ಬದುಕು ಹಸನು ಗೊಳಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರು ಗೋವುಗಳಿಗೆ ಮರ್ಯಾದೆ ಮತ್ತು ರಕ್ಷಣೆ ಕೊಡಬೇಕು ಎಂದು ಹೇಳಿದರು.
‘ಹಸುವಿನ ಜೀವಿತಾವಧಿ 13 ವರ್ಷ. ವಯಸ್ಸಾದ ರಾಸುಗಳನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಆದ ಕಾರಣ ಅದು ಆಶ್ರಮ ಸೇರುತ್ತದೆ. ಮಾಂಸಕ್ಕೆ ಬಳಸುತ್ತಿರುವವರಿಗೆ ಇದರಿಂದ ಪ್ರಯೋಜನ ಆಗುವುದಿಲ್ಲ ಎಂದರು.
ಮಹಿಳಾ ಘಟಕದ ಅಧ್ಯಕ್ಷೆ ಅಂಬಿಕಾ, ಜಿಲ್ಲಾ ಕಾರ್ಯದರ್ಶಿ ಓಂಕಾರ್, ಸುಜಾತಾ ಚಂದ್ರಶೇಖರ್, ಲೋಹಿತಾ ಬಾಯಿ, ಪ್ರೇಮಾ ಹೆಗ್ಡೆ, ಮುಖಂಡರಾದ ಕೊಪ್ಪಳ್ ನಾಗರಾಜ್, ಗಣೇಶ್ ಇದ್ದರು.