ಹೈದರಾಬಾದ್: ‘ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವಧಿಯಲ್ಲಿ ಬಿಜೆಪಿಯಲ್ಲಿ ಹೊಸ ಸಂಸ್ಕೃತಿ ಆರಂಭವಾಗಿದೆ’ ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ವ್ಯಂಗ್ಯವಾಡಿದ್ದಾರೆ.
ಪಕ್ಷದ ಸಂಸದರೊಂದಿಗೆ ಮಂಗಳವಾರ ವಿಡಿಯೊ ಸಂವಾದ ನಡೆಸಿದ ಅವರು, ‘ರಾಜ್ಯದ ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳದೆ ಬಿಜೆಪಿ ಪ್ರತೀಕಾರ ತೋರುತ್ತಿದೆ’ ಎಂದರು.
‘ಪ್ರಧಾನಿ ಮೋದಿ ಅವರನ್ನು ನಾನು ಗೌರವಿಸುತ್ತೇನೆ. ಸಭ್ಯ ರಾಜಕಾರಣದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೇನೆ. ಬಿಜೆಪಿ ನನ್ನನ್ನು ವೈಯಕ್ತಿಕವಾಗಿ ಗುರಿಯಾಗಿಸಿದರೆ, ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ. ಮೋದಿ, ಅಮಿತ್ ಶಾ ಕುರಿತು ಮಾತನಾಡಲು ಹಿಂಜರಿಯುವುದಿಲ್ಲ’ ಎಂದು ತಿಳಿಸಿದರು.
‘ಮೋದಿಗಿಂತಲೂ ಮೊದಲು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅನುಭವ ನನಗಿದೆ. ಅನೇಕ ಬಿಕ್ಕಟ್ಟಿನ ಸಂದರ್ಭಗಳನ್ನು ನಿಭಾಯಿಸಿದ್ದೇನೆ. ರಾಜಕೀಯ ವಿಷಯಗಳನ್ನು ರಾಜಕೀಯವಾಗಿಯೇ ಬಗೆಹರಿಸಿದ್ದೇನೆ. ಇದನ್ನು ಅವರಿಗೆ ಹೇಳಿ’ ಎಂದು ಸಂಸದರಿಗೆ ನಾಯ್ಡು ಅವರು ಕಿವಿಮಾತು ಹೇಳಿದರು.