ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಕಾಲೇಜು ಪ್ರವೇಶ ದೊಡ್ಡ ಸವಾಲು

Last Updated 23 ಜುಲೈ 2021, 6:52 IST
ಅಕ್ಷರ ಗಾತ್ರ

ತುಮಕೂರು: ಪಿಯು ಪರೀಕ್ಷೆ ತೆಗೆದುಕೊಂಡಿದ್ದ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಈಗ ಪದವಿ ಕಾಲೇಜುಗಳಲ್ಲಿ ಪ್ರವೇಶ ನೀಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಪಾಸಾಗಿ ಬಂದವರಿಗೆಲ್ಲ ಎಲ್ಲಿ ಪ್ರವೇಶ ಅವಕಾಶ ಕಲ್ಪಿಸಬೇಕು ಎಂಬ ಚಿಂತೆ ಕಾಡುತ್ತಿದೆ.

ಕಳೆದ ವರ್ಷ 14,404 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, ಈ ವರ್ಷ ಈ ಸಂಖ್ಯೆ 27,365ಕ್ಕೆ ಏರಿಕೆಯಾಗಿದೆ. ಹೆಚ್ಚು ಕಡಿಮೆ ದುಪ್ಪಟ್ಟಾಗಿದೆ. ಅದರಲ್ಲಿ ಈ ಸಲ ಕಲಾ ವಿಭಾಗದಲ್ಲಿ 6,891 (ಹಿಂದಿನ ವರ್ಷ 2,274), ವಾಣಿಜ್ಯ ವಿಭಾಗದಲ್ಲಿ 11,561 (ಹಿಂದಿನ ವರ್ಷ 6,449), ವಿಜ್ಞಾನದಲ್ಲಿ 8,913 (ಹಿಂದಿನ ವರ್ಷ 5,681) ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ವಿಜ್ಞಾನ ವಿಭಾಗದ ಕೆಲವರು ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಾರೆ. ಉಳಿದವರು ಮೂಲ ವಿಜ್ಞಾನ ಅಧ್ಯಯನಕ್ಕೆ ಮುಂದಾಗುತ್ತಾರೆ.ವಿಜ್ಞಾನ ಕೋರ್ಸ್‌ಗಳ ಅಧ್ಯಯನಕ್ಕೆ ಹೆಚ್ಚಿನ ಸಮಸ್ಯೆಯಾಗುವುದಿಲ್ಲ. ಆದರೆ ಕಲಾ, ವಾಣಿಜ್ಯ ವಿಭಾಗದವರು ಅದೇ ವಿಷಯಗಳಲ್ಲಿ ಅಧ್ಯಯನ ಮುಂದುವರಿಸಬೇಕಾಗುತ್ತದೆ. ಕಲಾ ವಿಭಾಗದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೂರುಪಟ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಎರಡುಪಟ್ಟು ಮಂದಿ ಪಾಸಾಗಿದ್ದು, ಪ್ರವೇಶ ಬಯಸಿದ್ದಾರೆ.

ಜಿಲ್ಲೆಯ ಪದವಿ ಕಾಲೇಜುಗಳಲ್ಲಿ ಇರುವ ಮೂಲ ಸೌಕರ್ಯ, ಪ್ರವೇಶ ಸಾಮರ್ಥ್ಯ, ಬೋಧಕರ ಸಂಖ್ಯೆ ಮೊದಲಾದ ವಿಚಾರಗಳನ್ನು ಗಮನಿಸಿದರೆ ಪ್ರವೇಶ ಬಯಸಿ ಬರುವ ಎಲ್ಲರಿಗೂ ಅವಕಾಶ ಕಲ್ಪಿಸುವುದು ಕಷ್ಟಕರವಾಗಲಿದೆ. ಮೂಲ ಸೌಕರ್ಯ ಹೆಚ್ಚಿಸಿ
ಕೊಂಡರಷ್ಟೇ ಪ್ರವೇಶ ನೀಡುವುದರ ಜತೆಗೆ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಕಾಲೇಜು– ಪ್ರವೇಶ ಸಾಮರ್ಥ್ಯ: ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಸೇರಿದಂತೆ 97 ಪದವಿ ಕಾಲೇಜುಗಳಿವೆ. ಹಿಂದಿನ ವರ್ಷ ತೇರ್ಗಡೆಯಾಗಿದ್ದ 14,404 ವಿದ್ಯಾರ್ಥಿಗಳಲ್ಲಿ 11,627 ಮಂದಿ ವಿವಿಧ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದರು. ವಿ.ವಿ ವ್ಯಾಪ್ತಿ ಕಾಲೇಜುಗಳಲ್ಲಿ 1,236, ಸರ್ಕಾರಿ ಕಾಲೇಜುಗಳಲ್ಲಿ 6,003, ಅನುದಾನಿತ ಕಾಲೇಜುಗಳಲ್ಲಿ 2,267, ಅನುದಾನ ರಹಿತ ಕಾಲೇಜುಗಳಲ್ಲಿ 1,760, ಸ್ವಾಯತ್ತ ಸಂಸ್ಥೆ ಕಾಲೇಜಿನಲ್ಲಿ 361 ವಿದ್ಯಾರ್ಥಿಗಳು ಅಧ್ಯಯನ ನಡೆಸಿದ್ದರು. ಈ ವರ್ಷ ತೇರ್ಗಡೆಯಾಗಿರುವ 27 ಸಾವಿರದಲ್ಲಿ ವೃತ್ತಿಪರ ಕೋರ್ಸ್ ಹೊರತುಪಡಿಸಿದರೆ ಸುಮಾರು 20 ಸಾವಿರ ವಿದ್ಯಾರ್ಥಿಗಳಾದರೂ ಪ್ರವೇಶ ಬಯಸಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷಕ್ಕಿಂತ ದುಪ್ಪಟ್ಟು ಸಂಖ್ಯೆಯ ಮಕ್ಕಳಿಗೆ ಅವಕಾಶ ಮಾಡಿಕೊಡಬೇಕಾಗಿದೆ.

ನಗರ ಹೊರತುಪಡಿಸಿದರೆ ಬಹುತೇಕ ಕಾಲೇಜುಗಳಲ್ಲಿ ಸಾಮರ್ಥ್ಯಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗಿದ್ದರು. ಇನ್ನೂ ಶೇ 20ರಿಂದ 30ರಷ್ಟು ಸೀಟುಗಳು ಉಳಿದುಕೊಂಡಿದ್ದವು. ಹಾಗಾಗಿ ಈ ವರ್ಷ ಕಾಲೇಜುಗಳು ಭರ್ತಿಯಾಗಲಿವೆ. ಹೆಚ್ಚುವರಿಯಾದರೆ ಮುಂದೆ ಏನು ಮಾಡಬೇಕು ಎಂಬ ಚಿಂತನೆಯಲ್ಲಿ ಇದ್ದೇವೆ ಎಂದು ಖಾಸಗಿ ಕಾಲೇಜೊಂದರ ಪ್ರಾಂಶುಪಾಲರು ತಿಳಿಸಿದರು.

ಪಾಳಿ ಆಧಾರದಲ್ಲಿ ತರಗತಿ

ಪ್ರವೇಶ ಬಯಸಿ ಬರುವ ಎಲ್ಲಾ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗುವುದು. ತುಮಕೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಇರುವ ಕಲಾ ಕಾಲೇಜಿನಲ್ಲಿ ಪಾಳಿ (ಶಿಫ್ಟ್) ಆಧಾರದ ಮೇಲೆ ತರಗತಿಗಳು ನಡೆಯುತ್ತಿವೆ. ಬೆಳಿಗ್ಗೆ 8ರಿಂದ 12.30 ಹಾಗೂ ಮಧ್ಯಾಹ್ನ 12.30ರಿಂದ 5.30ರ ವರೆಗೆ ಎರಡು ಪಾಳಿಯಲ್ಲಿ ತರಗತಿ ನಡೆಸಲಾಗುತ್ತಿದೆ. ಪ್ರವೇಶ ಹೆಚ್ಚಾದರೆ ಇತರೆ ಕಾಲೇಜುಗಳಲ್ಲೂ ಇದೇ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ತಿಳಿಸಿದರು.

ಅಗತ್ಯ ಇರುವೆಡೆ ಮೂಲ ಸೌಕರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಅತಿಥಿ ಉಪನ್ಯಾಸಕರ ನೇಮಕಕ್ಕೂ ಸೂಚನೆ ನೀಡಲಾಗುವುದು. ಇದರಿಂದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ಸಿಗಲಿವೆ ಎಂದರು.

ಈ ವರ್ಷದಿಂದ ಹೊಸ ಶಿಕ್ಷಣ ನೀತಿ ಜಾರಿಯಾಗುತ್ತಿದ್ದು, ವಿದ್ಯಾರ್ಥಿ ಅಧ್ಯಯನಕ್ಕೆ ಒಂದು ಕಾಲೇಜಿನ ಜತೆಗೆ ಮತ್ತೊಂದು ಕಾಲೇಜು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಒಂದು ವಿಷಯವನ್ನು ಒಂದು ಕಾಲೇಜಿನಲ್ಲಿ, ಮತ್ತೊಂದು ವಿಷಯವನ್ನು ಮತ್ತೊಂದು ಕಾಲೇಜಿನಲ್ಲಿ ಅಧ್ಯಯನ ಮಾಡಲು ಸಾಧ್ಯವಿದೆ. ವಿಷಯ ಆಧಾರಿತ ಪ್ರವೇಶ ನೀಡುವ ವ್ಯವಸ್ಥೆ ಜಾರಿಗೆ ಬರುತ್ತಿದೆ. ಹೊಸ ಶಿಕ್ಷಣ ನೀತಿ ಜಾರಿ ಮಾಡುತ್ತಿದ್ದು, ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಸವಾಲು ನಮ್ಮ ಮುಂದಿದೆ. ಎಲ್ಲವನ್ನೂ ನಿಭಾಯಿಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT