ತುಮಕೂರು: ಆಧುನಿಕ ಕಾಲದಲ್ಲಿ ಸಂವಹನ ಕೌಶಲ ಜ್ಞಾನ ಅಗತ್ಯವಾಗಿದ್ದು, ಇದು ಇಲ್ಲದೆ ಯಾವುದೇ ಕ್ರಿಯೆ ನಡೆಯುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಜೀವನದಲ್ಲಿ ಯಾವುದಾರೊಂದು ಸಕಾರಾತ್ಮಕ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರು ವಿಬು ಅಕಾಡೆಮಿಯ ವ್ಯಕ್ತಿತ್ವ ಮತ್ತು ಕೌಶಲ ಅಭಿವೃದ್ಧಿಯ ಅಧಿಕಾರಿ ಡಾ.ವಿ.ಬಿ.ಆರತಿ ತಿಳಿಸಿದರು.
ನಗರದ ಶ್ರೀದೇವಿ ಆಸ್ಪತ್ರೆಯಲ್ಲಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದ ಆಯೋಜಿಸಿದ್ದ ’ವ್ಯಕ್ತಿತ್ವ ಮತ್ತು ಕೌಶಲ ಅಭಿವೃದ್ಧಿ’ ಕುರಿತು ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ತಮ್ಮ ಭಾವನೆ, ವಿಚಾರ, ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ಸಂವಹನ ಪ್ರಾರಂಭವಾಗುತ್ತದೆ. ಇದರಲ್ಲಿ ಪರಸ್ಪರ ಸಂವಹನ, ಆತ್ಮ ಸಂವಹನ, ಸಾರ್ವಜನಿಕ ಸಂವಹನ ಎಂಬ ಮೂರು ರೀತಿಯ ಕ್ರಿಯೆ ನಡೆಯುತ್ತವೆ ಎಂದು ಹೇಳಿದರು.
ಜ್ಞಾನ, ಕೌಶಲ್ಯ, ಶಿಸ್ತು, ಪ್ರಾಮಾಣಿಕತೆ, ನೈಪುಣ್ಯವನ್ನು ಹೆಚ್ಚು ಬೆಳೆಸಿಕೊಳ್ಳಬೇಕು. ಇದರಿಂದ ಜೀವನದಲ್ಲಿ ದೊಡ್ಡ ದೊಡ್ಡ ಗುರಿ ಮತ್ತು ಕನಸುಗಳನ್ನು ಇಟ್ಟುಕೊಂಡು ಮುಂದೆ ನಡೆಯಬೇಕು ಎಂದು ಸಲಹೆ ನೀಡಿದರು.
ಶ್ರೀದೇವಿ ಟ್ರಸ್ಟ್ನ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ರಮಣ್ ಆರ್.ಹುಲಿನಾಯ್ಕರ್, ಮಾನವ ಸಂಪನ್ಮೂಲ ವಿಭಾಗದ ಎಂ.ಎಸ್.ಪಾಟೀಲ್ ಮಾತನಾಡಿದರು.
ಪ್ರಸ್ತೂತಿ ಮತ್ತು ಸ್ತ್ರೀರೋಗ ವೈದ್ಯ ಡಾ.ರೇಖಾ ಗುರುಮೂರ್ತಿ, ಶ್ರೀದೇವಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಹೇಮಾದ್ರಿನಾಯ್ಡು, ಡೀನ್ ಡಾ.ಎನ್.ಚಂದ್ರಶೇಖರ್, ಶ್ರೀದೇವಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಚೆನ್ನಮಲ್ಲಯ್ಯ ಇದ್ದಾರೆ.