ಕುಣಿಗಲ್: ತಾಲ್ಲೂಕಿನ ಬಹುತೇಕ ಪಿಡಿಒ ವರ್ಗಾವಣೆಯಾಗಿದ್ದು, ಕರ್ತವ್ಯದಿಂದ ಬಿಡುಗಡೆಗೊಳಿಸದಂತೆ ಜೆಡಿಎಸ್ ಕಾರ್ಯಕರ್ತರು ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು. ಕಾರ್ಯನಿರ್ವಾಹಕ ಅಧಿಕಾರಿ ಜೋಸೆಫ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಯುವ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎನ್. ಜಗದೀಶ, ತಾಲ್ಲೂಕಿನ ಬಹುತೇಕ ಸರ್ಕಾರಿ ಇಲಾಖೆಗಳಲ್ಲಿ ಮೂರು ವರ್ಷದಿಂದ ಅಧಿಕಾರಿಗಳ ಕೊರತೆ ಇದೆ. ಅನೇಕರು ವರ್ಗಾವಣೆ ಬಯಸಿ ಹೋಗುತ್ತಿದ್ದಾರೆ. ಒಂದೆಡೆ ಶಾಸಕರು, ಮತ್ತೊಂದೆಡೆ ಬಿಜೆಪಿ ಮುಖಂಡರು ಅಧಿಕಾರಿಗಳ ಲೋಪ ಎತ್ತಿ ಹಿಡಿದು, ನಂತರ ಹೊಂದಾಣಿಕೆ ವ್ಯವಹಾರಗಳು ಹೆಚ್ಚಾದ ಕಾರಣ ಸ್ವಯಂ ಪ್ರೇರಿತ ವರ್ಗಾವಣೆ ಹೆಚ್ಚಿದೆ. ತಾಲ್ಲೂಕಿನಲ್ಲಿ 36 ಗ್ರಾಮಪಂಚಾಯಿಗಳಿದ್ದು, ಕೇವಲ 17 ಪಂಚಾಯಿತಿಗಳಲ್ಲಿ ಪಿಡಿಒ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲೂ 8 ಮಂದಿ ವರ್ಗಾವಣೆಯಾಗಿದ್ದಾರೆ. ಅಧಿಕಾರಿಗಳು ಶಾಸಕರ ಗುಲಾಮರಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂರಿದರು.
ಪರ್ಯಾಯ ವ್ಯವಸ್ಥೆ ಯಾಗುವವರೆಗೂ ವರ್ಗಾವಣೆಯಾಗಿರುವ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡದಂತೆ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿದ್ದಂತೆ, ಕಸಬಾ ಹೋಬಳಿ ಕ್ಷೇತ್ರ ಅನುಸೂಚಿತ ವರ್ಗಕ್ಕೆ ಮೀಸಲಾಗಿರುವ ಕಾರಣ ಶಾಸಕರು ಪರಿಶಿಷ್ಟರ ಮನೆಯಲ್ಲಿ ಗ್ರಾಮ ವಾಸ್ತವ್ಯದ ನಾಟಕವಾಡಿದ್ದಾರೆ. ಪರಿಶಿಷ್ಟರ ಬಗ್ಗೆ ಕಾಳಜಿ ಇದ್ದರೆ, ಸೌಲಭ್ಯಗಳ ವಿತರಣೆಗೆ ಗಮನ ಹರಿಸಲಿ ಎಂದರು.
ಗ್ರಾಮಪಂಚಾಯಿತಿ ಸದಸ್ಯ ತರಿಕೆರೆ ಪ್ರಕಾಶ್, ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಕೆ.ಎಲ್.ಹರೀಶ್, ಪುರಸಭೆ ಸದಸ್ಯ ಶ್ರೀನಿವಾಸ್ ಮೂರ್ತಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ್ ನಾಯಕ್, ಮುಖಂಡರಾದ ಶೇಷಗಿರಿ, ರಂಗಸ್ವಾಮಿ, ವರದರಾಜು ಇದ್ದರು.