ತುಮಕೂರು: ’ಸಮಾಜದಲ್ಲಿ ಶಾಂತಿ ನೆಲೆಸಲು, ದುಷ್ಟ ಶಕ್ತಿಗಳನ್ನು ನಿಯಂತ್ರಿಸುವುದು ಸೇರಿದಂತೆ ಪೋಲಿಸರಿಗೆ ಪ್ರತಿ ಹಂತದಲ್ಲಿ ಜವಾಬ್ದಾರಿಗಳು ಇವೆ. ಪೊಲೀಸರೆಂದರೆ ನಮ್ಮ ಸಮಾಜದೊಳಗಿನ ಸೈನಿಕರು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಸಂಜೀವಕುಮಾರ್ ಹಂಚಾಟೆ ಹೇಳಿದರು.
ಸೋಮವಾರ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಆಯೋಜಿಸಿದ್ಧ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸ್ ಪುತ್ಥಳಿಗೆ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದ ಬಳಿಕ ಮಾತನಾಡಿದರು.
’ದೇಶದ ಗಡಿಯಲ್ಲಿ ನಮ್ಮ ಸೈನಿಕರು ದೇಶ ಕಾಯುತ್ತಾರೆ. ಶತ್ರುಗಳ ವಿರುದ್ಧ ಹೋರಾಡಿ ದೇಶವನ್ನು ಕಾಪಾಡುತ್ತಾರೆ. ಪೊಲೀಸರು ಸಮಾಜದೊಳಗಿನ ದುಷ್ಟ ಶಕ್ತಿಗಳ ನಿಯಂತ್ರಿಸಿ ಶಾಂತಿ ನೆಲೆಸಲು ಶ್ರಮಿಸುತ್ತಾರೆ’ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಮಾತನಾಡಿ,‘1959ರ ಅಕ್ಟೋಬರ್ 21ರಂದು ದೇಶದ ಉತ್ತರ ಗಡಿ ಭಾಗದಲ್ಲಿ ಚೀನಾ ಸೈನಿಕರ ವಿರುದ್ಧ ಹೋರಾಡಿ ಪೊಲೀಸರು ವೀರಮರಣವನ್ನಪ್ಪಿದರು. ಅವರ ಸ್ಮರಣಾರ್ಥ ಹಾಗೂ ದೇಶದಲ್ಲಿ ಹುತಾತ್ಮರಾದ ಪೊಲೀಸರನ್ನು ಸ್ಮರಿಸಲು ಹುತಾತ್ಮ ದಿನ ಆಚರಣೆ ಮಾಡಲಾಗುತ್ತಿದೆ’ ಎಂದು ವಿವರಿಸಿದರು.
ಕಳೆದ ಒಂದು ವರ್ಷ ವಧಿಯಲ್ಲಿ ದೇಶದಲ್ಲಿ ಹುತಾತ್ಮರಾದ 292 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಸರುಗಳನ್ನು ಓದಿ ಸ್ಮರಿಸಿದರು.
ನಿವೃತ್ತ ಪೊಲೀಸ್ ಅಧಿಕಾರಿಗಳ ಪ್ರತಿನಿಧಿಗಳು, ಪೊಲೀಸ್ ಅಧಿಕಾರಿಗಳ ಪ್ರತಿನಿಧಿಗಳು, ಚುನಾಯಿತಿ ಪ್ರತಿನಿಧಿಗಳ ಪ್ರತಿನಿಧಿಗಳು, ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳು, ಪೊಲೀಸ್ ಸಿಬ್ಬಂದಿ ಪ್ರತಿನಿಧಿಗಳು ಪುತ್ಥಳಿಗೆ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದರು.
ಹುತಾತ್ಮ ಪೊಲೀಸರ ಗೌರವಾರ್ಥ ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಹಾರಿಸಿ ಗೌರವ ಸಲ್ಲಿಸಲಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್ ವೇದಿಕೆಯಲ್ಲಿದ್ದರು.