ಚಿಕ್ಕನಾಯಕನಹಳ್ಳಿ: ‘ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ನೆರೆ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ದಿವಾಳಿಯಾದರೆ, ಭಾರತದಲ್ಲಿ ಜಿಡಿಪಿ ಏರಿಕೆಯಾಗಿ ದೇಶ ಸುಸ್ಥಿತಿಯಲ್ಲಿದೆ’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ತಾಲ್ಲೂಕಿನ ಮತಿಘಟ್ಟದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಮಾತನಾಡಿದರು.
ಒಂದು ಸಾವಿರ ಕೋಟಿ ವೆಚ್ಚದಲ್ಲಿ ಹೇಮಾವತಿ ನಾಲೆಯಿಂದ ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ, ಬೆಳ್ಳಾವಿ ಭಾಗದ 122 ಕೆರೆಗಳಿಗೆ ನೀರುಣಿಸಲಾಗಿದೆ. ತಾಲ್ಲೂಕಿನ 26 ಕೆರೆಗಳಿಗೆ ನೀರು ಬಂದಿದೆ ಎಂದರು.
ತಾಲ್ಲೂಕಿನಲ್ಲಿ 300ಕ್ಕೂ ಹೆಚ್ಚು ಕಿಲೋ ಮೀಟರ್ ರಸ್ತೆ ಡಾಂಬರೀಕರಣ ಮಾಡಲಾಗಿದೆ. 5 ಕಡೆ ವಿದ್ಯುತ್ ಉಪಸ್ಥಾವರ ಮಾಡಲಾಗಿದೆ. ಚಿಕ್ಕನಾಯಕನಹಳ್ಳಿ, ಹುಳಿಯಾರಿನಲ್ಲಿ ನೂತನ ಪೋಲಿಸ್ ಠಾಣೆ ಹಾಗೂ ಪ್ರವಾಸಿ ಮಂದಿರ ಕಟ್ಟಲಾಗುತ್ತಿದೆ ಎಂದರು.
ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಾಲೊನಿಗಳಿಗೆ ಸಿಮೆಂಟ್ ರಸ್ತೆ ನಿರ್ಮಿಸಿದ್ದೇವೆ. ಗೊಲ್ಲರಹಟ್ಟಿಗಳಲ್ಲಿ 2,500 ಮನೆ, ಉಪ್ಪಾರ ಸಮುದಾಯದವರಿಗೆ 2 ಸಾವಿರ ಮನೆ ಹಾಗೂ ಹುಳಿಯಾರು ಹೋಬಳಿಗಳಲ್ಲಿ 600 ಮನೆ ನೀಡಿದ್ದೇವೆ ಎಂದರು.
ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಗೆ ₹320 ಕೋಟಿ ಬಿಡುಗಡೆಯಾಗಿದ್ದು, ₹117 ಕೋಟಿ ವೆಚ್ಚದಲ್ಲಿ ತಾಲ್ಲೂಕಿನಲ್ಲಿ ಮನೆಮನೆಗೆ ಶುದ್ಧ ಕುಡಿಯುವ ನೀರಿನ ಯೋಜನೆ ಹಾಗೂ 114 ಹೊಸ ಟ್ಯಾಂಕ್ ನಿರ್ಮಿಸಲಾಗಿದೆ ಎಂದರು.
‘ತಾಲ್ಲೂಕಿನ ವಿವಿಧ ದೇವಾಲಯಗಳ ಜೀರ್ಣೋದ್ದಾರಕ್ಕೆ ₹7 ಕೋಟಿ ಬಿಡುಗಡೆಯಾಗಿದ್ದು ಚಿಕ್ಕನಾಯಕನಹಳ್ಳಿಯ ಹಳೆಯೂರು ಆಂಜನೇಯಸ್ವಾಮಿ ದೇವಸ್ಥಾನದ ಅಭಿವೃದ್ಧಿ ಹಾಗೂ ಸಮುದಾಯ ಭವನ ನಿರ್ಮಿಸಲು ₹3 ಕೋಟಿ, ಪಟ್ಟಣದಲ್ಲಿ ₹60 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಮಾಡುತ್ತಿದ್ದು, ಈ ಎಲ್ಲ ಅಭಿವೃದ್ಧಿ ಕಾರ್ಯಗಳು ಮಾಜಿ ಶಾಸಕರಿಗೆ ಗೊತ್ತಿಲ್ಲವೇ’ ಎಂದರು.
ಮಂಡಲ ಬಿಜೆಪಿ ಅಧ್ಯಕ್ಷ ಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿ ನಿರಂಜನ್, ಹಾಲು ಒಕ್ಕೂಟದ ನಿರ್ದೇಶಕ ಶಿವನಂಜಪ್ಪ ಹಳೆಮನೆ, ಪುರಸಭಾ ಸದಸ್ಯ ಶ್ಯಾಮ್, ಎಪಿಎಂಸಿ ಸದಸ್ಯ ಶಿವರಾಜ್, ಹುಳಿಯಾರು ಗ್ರಾ.ಪಂ ಅಧ್ಯಕ್ಷ ಕಿರಣ್ ಕುಮಾರ್ ಇದ್ದರು.