ತುಮಕೂರು: ಸ್ಲಿಮ್ ಕೇರ್ ಹಾಗೂ ಕಲರ್ಸ್ನಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳುವುದಾಗಿ ನಂಬಿಸಿ ನಗರದ ಗಾಂಧಿನಗರ ನಿವಾಸಿ ಜಗದಂಬಾ ಅವರಿಂದ ₹ 29 ಲಕ್ಷ ಹಣ ಪಡೆದು ವಾಪಸ್ ಕೊಡದೇ ಬೆಂಗಳೂರು ಮೂಲದ ದಂಪತಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ಕಮ್ಮನಹಳ್ಳಿಯ ನಿವಾಸಿ ಅಶ್ವಿನಿ ಮತ್ತು ಪ್ರಭಾಕರ್ ವಂಚನೆ ಮಾಡಿದ ದಂಪತಿಯಾಗಿದ್ದಾರೆ.
ನಗರದ ಎಸ್ಐಟಿ ಬ್ಯಾಕ್ ಗೇಟ್ನಲ್ಲಿ ಡಾಕ್ಟರ್ ಡರ್ಮಾಲಜಿಸ್ಟ್ ವಿ3 ಸ್ಲಿಮ್ ಕೇರ್ ಕ್ಲಿನಿಕ್ ನಡೆಸುತ್ತಿದ್ದ ಈ ದಂಪತಿ ಜಗದಂಬಾ ಅವರನ್ನು ಪರಿಚಯ ಮಾಡಿಕೊಂಡು ಪಾಲುದಾರರನ್ನಾಗಿ ಮಾಡಿಕೊಳ್ಳುವುದಾಗಿ ₹ 29 ಲಕ್ಷ ಹಣ ಪಡೆದಿದ್ದರು. ನಂತರ ಹಣ ವಾಪಸ್ ಕೊಟ್ಟಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ತಿಲಕ್ ಪಾರ್ಕ್ ಠಾಣೆ ಇನ್ಸ್ಪೆಕ್ಟರ್ ಪಾರ್ವತಮ್ಮ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ಮಂಜುಳಾ ನೇತೃತ್ವದಲ್ಲಿ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಹೊಸ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಚ್ಚರಿಕೆ: ದಾಖಲಾತಿ ಇಲ್ಲದೇ ಸಾರ್ವಜನಿಕರು ಯಾವುದೇ ರೀತಿ ಹಣಕಾಸಿನ ವಿಚಾರದಲ್ಲಿ ವ್ಯವಹಾರ ಮಾಡಬಾರದು.. ವ್ಯವಹಾರಕ್ಕೆ ಮುಂಚೆ ಸಾಕಷ್ಟು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ.
ದ್ವಿಚಕ್ರವಾಹನ ವಶ; ಒಬ್ಬನ ಬಂಧನ
ದಾಖಲಾತಿ ಇಲ್ಲದ ದ್ವಿಚಕ್ರವಾಹನದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಶರತ್ ಕಾರಂತ್ ಎಂಬುವವನನ್ನು ತಿಲಕ್ ಪಾರ್ಕ್ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.