ಕೊಡಿಗೇನಹಳ್ಳಿ: ಸ್ವಂತ ಜಮೀನಿನ ಮೇಲೆ ದಾಖಲೆ ಇದ್ದರು ಕೂಡ ಕೆಲ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಠಿಸಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಜಮೀನು ವಾರಸುದಾರರು ಬುಧವಾರ ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈಡಿಗ ಸಮುದಾಯದ ಆದೆಪ್ಪನವರ ಮಕ್ಕಳಾದ ರಾಮಪ್ಪ, ವೆಂಕಟಸ್ವಾಮಪ್ಪ ಹಾಗೂ ನಾಗರಾಜಪ್ಪ ದೂರು ನೀಡಿದ ವ್ಯಕ್ತಿಗಳು.
‘ಹೋಬಳಿಯ ತಿಂಗಳೂರು ಗ್ರಾಮದ 1.37 ಗುಂಟೆ ಜಮೀನನ್ನು (ಸರ್ವೆ ನಂಬರ್ 163ರಲ್ಲಿರುವ) ಟಿ.ಎ.ಭೂಪಾಲ್, ವೆಂಕಟರವಣಪ್ಪ, ಸಂಜೀವರೆಡ್ಡಿ ಹಾಗೂ ಗೌರಿಬಿದನೂರು ತಾಲ್ಲೂಕು ಕಲ್ಲೂಡಿ ಗ್ರಾಮದ ದಾಸಪ್ಪ ಎಂಬುವವರು ಸುಳ್ಳು ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ನಮ್ಮ ತಂದೆಯವರಾದ ಆದೆಪ್ಪ ಎಂಬುವವರಿಗೆ ಸರ್ಕಾರದಿಂದ ದರ್ ಕಾಸ್ತ್ ಭೂಮಿ 1.37 ಎಕರೆ ಮಂಜೂರಾಗಿತ್ತು. 1978-79ರಲ್ಲಿ ಸಾಗುವಳಿ ಚೀಟಿ ಕೂಡ ನೀಡಿದ್ದರಿಂದ ಖಾತೆ, ಪಹಣೆ ಕೂಡ ಹೊಂದಿದ್ದೆವು. ನಾವು ಕೆಲಸಕ್ಕೆ ಬೆಂಗಳೂರಿಗೆ ಹೋಗಿದ್ದರಿಂದ ಜಮೀನನ್ನು 5.3.2018 ರಂದು ನಮ್ಮ ಜಮೀನಿನ ಮೇಲೆ ನಮ್ಮ ಗ್ರಾಮದ ವೆಂಕಟರವಣಪ್ಪ ನಕಲಿ ದಾಖಲೆ ಪತ್ರಗಳ ಜತೆಗೆ 204745173250 ನಕಲಿ ಆಧಾರ್ ಕಾರ್ಡ್ ನಂಬರನ್ನು ಕೊಟ್ಟು ಕಾಳೇನಹಳ್ಳಿ ಗ್ರಾಮದ ಎಮ್.ವಿಶ್ವನಾಥರೆಡ್ಡಿಗೆ ಕ್ರಯಪತ್ರ ಮಾಡಿ ರಿಜಿಸ್ಟರ್ ಮಾಡಿಕೊಟ್ಟಿರುತ್ತಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.