ತುಮಕೂರು: ಹೆಬ್ಬೂರು ಹೋಬಳಿಯ ಚಿಕ್ಕಯ್ಯನಪಾಳ್ಯ ಹಾಗೂ ಲಕ್ಕೇನಹಳ್ಳಿ ದೇವಸ್ಥಾನಗಳಲ್ಲಿ ಶನಿವಾರ ರಾತ್ರಿ ಹುಂಡಿ ಹಣ ಕಳುವಾಗಿದೆ.
ಚಿಕ್ಕಯ್ಯನಪಾಳ್ಯದ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಹಾಗೂ ಲಕ್ಕೇನಹಳ್ಳಿ ಲಕ್ಷ್ಮಿ ಮಾರಮ್ಮ ದೇವಸ್ಥಾನದಲ್ಲಿ ಕಳವು ಪ್ರಕರಣ ನಡೆದಿದೆ. ಎಂದಿನಂತೆ ಪೂಜೆಗೆ ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮಳೆ ಕಾರಣದಿಂದ ಈ ವ್ಯಾಪ್ತಿಯಲ್ಲಿ ರಾತ್ರಿಯಿಡೀ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಅದನ್ನೇ ಲಾಭವಾಗಿಸಿಕೊಂಡ ಕಳ್ಳರು ಎರಡೂ ದೇವಸ್ಥಾನಗಳಲ್ಲಿನ ಹುಂಡಿ ಒಡೆದು ಹಣ ದೋಚಿದ್ದಾರೆ.
ಚಿಕ್ಕಯ್ಯನಪಾಳ್ಯ ದೇಗುಲದ ಹುಂಡಿಯಲ್ಲಿದ್ದ ಸುಮಾರು ₹ 2 ಲಕ್ಷ ಹಾಗೂ ಲಕ್ಕೇನಹಳ್ಳಿ ದೇಗುಲದ ₹ 1 ಲಕ್ಷ ದೋಚಲಾಗಿದೆ ಎಂದು ಗ್ರಾಮಸ್ಥರು ಹೆಬ್ಬೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.