ತಿಪಟೂರು: ಕುಡಿದು ಗಲಾಟೆ ಮಾಡುತ್ತಿದ್ದ ಗಂಡನ ಮೇಲೆ ಹೆಂಡತಿಯೇ ಬಿಸಿ ಸಾಂಬಾರನ್ನು ಚೆಲ್ಲಿ ಗಾಯಗೊಳಿಸಿದ ಘಟನೆ ತಿಪಟೂರು ಗ್ರಾಮಾಂತರ ರಂಗಾಪುರದಲ್ಲಿ ನಡೆದಿದೆ.
ಗಂಗಾಧರ್ ಪತ್ನಿಯಿಂದ ಹಲ್ಲೆಗೊಳಗಾದವರು. ಗುರುವಾರ ರಾತ್ರಿ ಕುಡಿದು ಮನೆಗೆ ಬಂದಿದ್ದ ಗಂಗಾಧರ್ ಹೆಂಡತಿ ತಾರಾ ಅವರೊಂದಿಗೆ ಜಗಳ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದಾಗ ಕೋಪಗೊಂಡ ಹೆಂಡತಿ ಬಿಸಿ ಸಾಂಬಾರನ್ನು ಗಂಡನ ಮೈ ಮೇಲೆ ಚೆಲ್ಲಿದ್ದಾರೆ. ಇದರಿಂದ ಗಂಡನ ಮುಖ ಮತ್ತು ಮೈಯಲ್ಲಿ ಸುಟ್ಟ ಗಾಯಗಳಾಗಿವೆ.
ಶುಕ್ರವಾರ ಗಂಗಾಧರ್ ಅವರೇ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಂಗಾಧರ್ ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.