ತುಮಕೂರು: ಎಸ್ಡಿಪಿಐ ಸೇರಿದಂತೆ ಶಾಂತಿ ಕದಡುವ ಎಲ್ಲ ಸಂಘಟನೆಗಳನ್ನೂ ನಿಷೇಧಿಸಬೇಕು’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಗ್ರಹಿಸಿದರು.
ಇಲ್ಲಿ ಸುದ್ದಿಗಾರರ ಜತೆ ಬುಧವಾರ ಮಾತನಾಡಿ, ‘ಎಸ್ಡಿಪಿಐ ಸಂಘಟನೆ ಬೆಳೆಸಿದವರು ಯಾರು, ರಕ್ಷಣೆ ಕೊಟ್ಟಿದ್ದು ಯಾವ ಪಕ್ಷ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಈ ಹಿಂದಿನ ಹಲವು ಘಟನೆಗಳಲ್ಲಿ ಎಸ್ಡಿಪಿಐ ಪಾತ್ರ ಇದೆ ಎನ್ನುವುದು ಎಲ್ಲರಿಗೂ ತಿಳಿದಿದೆ’ ಎಂದರು.
‘ಶಾಂತಿ, ಸೌಹಾರ್ದ ಕದಡುವ ದಿಕ್ಕಿನಲ್ಲಿ ಯಾವ ಸಂಘಟನೆಗಳು ಯಾವ ದಿಕ್ಕಿನಲ್ಲಿ ಕೆಲಸ ಮಾಡಿವೆ ಎನ್ನುವುದು ಎಲ್ಲರಿಗೂ ಗೊತ್ತು. ಇಂತಹ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕರು ಹೇಳಿಕೆ ಕೊಡುವಾಗ ಸಮಾಜದ ಹಿತವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಯಾವುದೇ ಪಕ್ಷ, ಸಂಘಟನೆಯಾಗಲಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಅವಕಾಶವಿಲ್ಲ ಎಂದು ಹೇಳಿದರು.