ಗುಬ್ಬಿ: ಸಮುದಾಯದ ಹೋರಾಟದ ಫಲವಾಗಿ ಸರ್ಕಾರವು ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿ ಆಚರಿಸುವ ಜೊತೆಗೆ ನಿಗಮ ಸ್ಥಾಪಿಸಿ ಅನುದಾನ ನೀಡಿದೆ. ಆ ಮೂಲಕ ಸಮುದಾಯದ ಅಭಿವೃದ್ಧಿಗೆ ಕ್ರಮವಹಿಸಿದೆ ಎಂದು ಅಗ್ನಿ ಬನ್ನಿರಾಯ ಸ್ವಾಮಿ ವಿದ್ಯಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ನಂಜೇಗೌಡ ತಿಳಿಸಿದರು.
ಮಂಗಳವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆದರೆ ಸಂಘ ಬಲಪಡಿಸಿ ಸಮುದಾಯದ ಅಭಿವೃದ್ಧಿ ಮಾಡಲು ಸಾಧ್ಯ ಎಂದರು.
ಉಪನ್ಯಾಸಕಿ ಮಂಜಮ್ಮ ಮಾತನಾಡಿ, ‘ಪರಿಶ್ರಮ, ಶ್ರದ್ಧೆ ಇದ್ದಲ್ಲಿ ಗುರಿ ಮುಟ್ಟಲು ಸಾಧ್ಯ. ಸಮುದಾಯದ ಹಿರಿಯರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಅದರಲ್ಲಿಯೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದಲ್ಲಿ ಮಹಿಳೆಯರು ಸಾಧನೆಯ ಪಥದಲ್ಲಿ ಸಾಗಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ. ಶಿಕ್ಷಣದಿಂದ ಮಾತ್ರ ಆಧುನಿಕ ಸಮಾಜದ ಸವಾಲುಗಳನ್ನು ಎದುರಿಸಲು ಸಾಧ್ಯ’ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಡಾ.ಮಧುಸೂದನ್ ಮಾತನಾಡಿ, ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ತಿಗಳ ಸಮುದಾಯವು ತನ್ನದೇ ಆದ ಐತಿಹಾಸಿಕ ಪರಂಪರೆ ಹೊಂದಿದೆ. ಇದುವರೆಗೂ ತಿಗಳ ಸಮುದಾಯಕ್ಕೆ ಸೇರಿದ ಸುಮಾರು 24 ಶಿಲಾ ಶಾಸನಗಳು ದೊರೆತಿವೆ. ಇನ್ನೂ ಹೆಚ್ಚಿನ ಸಂಶೋಧನೆ ನಡೆಸಿ ಸಮುದಾಯದ ಇತಿಹಾಸವನ್ನು ಎಲ್ಲರಿಗೂ ತಿಳಿಸಿಕೊಡುವ ಅಗತ್ಯವಿದೆ ಎಂದು ಹೇಳಿದರು.
ಮುಖಂಡ ಯೋಗಾನಂದ್ ಮಾತನಾಡಿ, ಸಮುದಾಯದ ಇತಿಹಾಸ, ಪರಂಪರೆಯನ್ನು ಎಲ್ಲರಿಗೂ ತಿಳಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ. ಸಮುದಾಯದ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಂದಾಗಿ ರಾಜಕೀಯ ಶಕ್ತಿಯನ್ನು ಪಡೆಯೋಣ. ತಾಲ್ಲೂಕಿನಲ್ಲಿ ತಿಗಳ ಸಂಘದ ಅಭಿವೃದ್ಧಿಗೆ ಕಾರಣರಾಗಿರುವ ಎಲ್ಲಾ ಹಿರಿಯರನ್ನು ಅನುಸರಿಸಿ ಸಮಾಜವನ್ನು ಸದೃಢವಾಗಿ ಕಟ್ಟಿ ಬೆಳೆಸೋಣ ಎಂದು ಕರೆ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೆ ಮುಂಚೆ ಚನ್ನಬಸವೇಶ್ವರ ದೇವಸ್ಥಾನದಿಂದ ಜನಪದ ಕಲಾ ತಂಡ ಹಾಗೂ ಪೂರ್ಣ ಕುಂಭಗಳೊಂದಿಗೆ ಅಗ್ನಿ ಬನ್ನಿರಾಯ ಸ್ವಾಮಿ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಗ್ನಿವಂಶ ಕ್ಷತ್ರಿಯ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಉಂಡೆ ರಾಮಣ್ಣ, ಕಾರ್ಯದರ್ಶಿ ಮಲ್ಲಪ್ಪ, ಮುಖಂಡರಾದ ಶಿವಣ್ಣ, ಬಲರಾಮಯ್ಯ, ನರಸೇಗೌಡ, ಲೋಕೇಶ್ ಬಾಬು, ಕುಮಾರ್, ಕೃಷ್ಣಮೂರ್ತಿ, ಮಂಗಳಮ್ಮ, ಮಹಾಲಕ್ಷ್ಮಿ, ಹುಚ್ಚೇಗೌಡ, ಗೋವಿಂದಪ್ಪ, ಅರ್ಜುನಪ್ಪ, ನಾಗರಾಜು, ಅಶ್ವಥ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.