ತುಮಕೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ರಾಷ್ಟ್ರೀಯ ಲೋಕ್ ಅದಾಲತ್ನ ಭಾಗವಾಗಿ ಡಿಸೆಂಬರ್ 14ರಂದು ಅದಾಲತ್ ನಡೆಸಿ, ರಾಜೀ ಆಗಬಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಲು ಮುಹೂರ್ತ ನಿಗದಿ ಪಡಿಸಿದೆ.
'ಸರ್ವರಿಗೂ ನ್ಯಾಯ' ಎಂಬ ಆಶಯದಡಿ ಹಮ್ಮಿಕೊಳ್ಳಲಾಗಿರುವ ಈ ಅದಾಲತ್ನಲ್ಲಿ ಪ್ರಕರಣಗಳನ್ನು ಸುಖಾಂತ್ಯಕ್ಕೆ ತಲುಪಿಸಿ ಎಂದು ಪ್ರಾಧಿಕಾರವು ಕಕ್ಷಿದಾರರಲ್ಲಿ ಮನವಿ ಮಾಡಿದೆ.
ಎಲ್ಲ ಪ್ರಕರಣಗಳನ್ನು ವಾದ ವಿವಾದದ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದೇನಿಲ್ಲ. ಮಾತುಕತೆಯ ಮೂಲಕ ಸಂಧಾನ ಮಾಡಿಕೊಳ್ಳಬಹುದು ಎಂದು ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಹಂಚಾಟೆ ಸಂಜೀವ್ ಕುಮಾರ್ ಹೇಳಿದರು.
ಅವರು ಅದಾಲತ್ ಕುರಿತ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು.
ನಮ್ಮ ದೇಶದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ವಿಲೇವಾರಿ ಮಾಡುವಷ್ಟು ನ್ಯಾಯಾಧೀಶರು ಮತ್ತು ನ್ಯಾಯಾಲಯಗಳು ಇಲ್ಲ. ಹಾಗಾಗಿ ಇತ್ಯರ್ಥವಾಗದ ಪ್ರಕರಣಗಳ ಸಂಖ್ಯೆ ನಿತ್ಯ ಬೆಳೆಯುತ್ತಿದೆ. ಈ ಅಸಮತೋಲನವನ್ನು ಕಡಿಮೆ ಮಾಡಲು ಅದಾಲತ್ ನೆರವಾಗಲಿದೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಶರಥ, ತುಮಕೂರು ವಕೀಲರ ಸಂಘದ ಅಧ್ಯಕ್ಷ ಜೆ.ಕೆ.ಅನೀಲ್, ಪ್ರಧಾನ ಕಾರ್ಯದರ್ಶಿ ಬಿ.ಆರ್.ದೇವರಾಜ್ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.
ಮಾಹಿತಿಗೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, 1ನೇ ಮಹಡಿ, ನ್ಯಾಯಾಲಯದ ಹೊಸ ಸಂಕೀರ್ಣ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ, ತುಮಕೂರು. https://nalsa.gov.in/lok-adalat
*
ಅದಾಲತ್ಗೆ ಯಾವ ಪ್ರಕರಣ ಒಯ್ಯಬಹುದು?
ವ್ಯಾಜ್ಯ ಪೂರ್ವ ಪ್ರಕರಣಗಳು
* ಚೆಕ್ ಬೌನ್ಸ್
* ಬ್ಯಾಂಕ್ ಸಾಲ ವಸೂಲಾತಿ
* ಕಾರ್ಖಾನೆ ಕಾರ್ಮಿಕ ಮತ್ತು ಮಾಲೀಕರ ನಡುವಿನ ವಿವಾದ
* ವಿದ್ಯುತ್ ಮತ್ತು ನೀರಿನ ಶುಲ್ಕ ಪಾವತಿ
* ಸಿ.ಆರ್.ಪಿ.ಸಿ. ಸೆಕ್ಷನ್ 320 ಅಡಿಯಲ್ಲಿ ಬರುವ ರಾಜೀ ಆಗಬಲ್ಲ ಪ್ರಕರಣಗಳು
ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು
* ರಾಜೀ ಆಗಬಹುದಾದ ಅಪರಾಧ ಪ್ರಕರಣಗಳು
* ಬ್ಯಾಂಕ್ ಪ್ರಕರಣಗಳು
* ಮೋಟಾರು ಅಪಘಾತ ಪರಿಹಾರ ಪ್ರಕರಣ
* ಕೈಗಾರಿಕಾ ಕಾರ್ಮಿಕರ ವೇತನದ ಪ್ರಕರಣಗಳು
* ವೈವಾಹಿಕ(ವಿಚ್ಚೇದನ ಹೊರತುಪಡಿಸಿ) ಮತ್ತು ಕೌಟುಂಬಿಕ ಜೀವನಾಂಶ ಪ್ರಕರಣ
* ಭೂಸ್ವಾಧೀನ ಪ್ರಕರಣ
* ವೇತನ, ಭತ್ಯೆ, ಪಿಂಚಣಿ ಪ್ರಕರಣಗಳು
* ಕಂದಾಯ ಪ್ರಕರಣಗಳು
ಪ್ರಯೋಜನವೇನು?
* ದಾವೆಯ ಶೀಘ್ರ ಇತ್ಯರ್ಥ
* ಬಾಂಧವ್ಯ ಉಳಿದು, ವಿವಾದ ಸುಖ್ಯಾಂತ
* ನ್ಯಾಯಾಲಯದ ಶುಲ್ಕ ಮರುಪಾವತಿ(ದಾವೆ ಹೂಡಿದ್ದರೆ)
***
ಲೋಕ್ ಅದಾಲತ್ನಲ್ಲಿ ನೀಡಲಾದ ನ್ಯಾಯ ತೀರ್ಮಾನವನ್ನು ಪ್ರಶ್ನಿಸಿ ಯಾವುದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಹಂಚಾಟೆ ಸಂಜೀವ್ ಕುಮಾರ್, ಪ್ರಧಾನ ನ್ಯಾಯಾಧೀಶ, ಜಿಲ್ಲಾ ಸೆಷನ್ಸ್ ನ್ಯಾಯಾಲಯ