ತುಮಕೂರು: ‘ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಎಸ್.ಪಿ.ಮುದ್ದಹನುಮೇಗೌಡ ಅವರು ಸ್ಪರ್ಧಿಸಿದ್ದರೆ ನನ್ನ ಗೆಲುವು ಕಷ್ಟವಾಗುತ್ತಿತ್ತು. ಎಚ್.ಡಿ.ದೇವೇಗೌಡರು ಬಂದಿದ್ದು ವರವಾಯಿತು’ ಎಂದು ಬಿಜೆಪಿ ವಿಜೇತ ಅಭ್ಯರ್ಥಿ ಜಿ.ಎಸ್.ಬಸವರಾಜ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ನನ್ನ ಒಳ್ಳೆಯ ಸ್ನೇಹಿತರು. ಆದರೆ ಅವರು ನನಗೆ ಸಹಾಯ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲ ಪಕ್ಷದವರೂ ನನಗೆ ಮತ ಹಾಕಿದ್ದಾರೆ. ಆದಕಾರಣ ನಾನು ಗೆದ್ದಿದ್ದೇನೆ’ ಎಂದರು.
’ಎಚ್.ಡಿ.ದೇವೇಗೌಡರ ಕುಟುಂಬ ಎಂದೂ ಸತ್ಯವನ್ನು ಹೇಳುವುದಿಲ್ಲ. 2014ರ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರು ಮೋದಿ ಪ್ರಧಾನಿ ಆದರೆ ದೇಶ ಬಿಡುತ್ತೇನೆ ಎಂದಿದ್ದರು. ಈ ಬಾರಿ ಎಚ್.ಡಿ.ರೇವಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದಿದ್ದರು. ಈಗ ಪ್ರಜ್ವಲ್ ರೇವಣ್ಣ ರಾಜೀನಾಮೆ ನಾಟಕ ಆಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.