ತುಮಕೂರು: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಹೆಚ್ಚಿಸಲು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೊದ ಕೊಡುಗೆಗಳನ್ನು ಪರಿಚಯಿಸಲು ನಗರದ ಸಿದ್ಧಗಂಗಾ ತಾಂತ್ರಿಕ ಕಾಲೇಜಿನಲ್ಲಿ ಇತ್ತೀಚೆಗೆ ವಿಶ್ವ ಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಪ್ರೌಢಶಾಲಾ ಮಕ್ಕಳಿಗೆ ಆಯೋಜಿಸಿದ್ಧ ರಸಪ್ರಶ್ನೆ, ಆಶುಭಾಷಣ ಸ್ಪರ್ಧೆ ಮತ್ತು ವಸ್ತು ಪ್ರದರ್ಶನದಲ್ಲಿ ತುಮಕೂರು, ದಾವಣಗೆರೆ, ಚಿತ್ರದುರ್ಗ ಮತ್ತು ಮೈಸೂರು ಜಿಲ್ಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಯು.ಆರ್.ರಾವ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಪಿ.ಕುನ್ಹಿಕೃಷ್ಣನ್, ‘ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ, ಸ್ಪರ್ಧಾತ್ಮಕ ಯುಗದಲ್ಲಿ ಅಧ್ಯಯನ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಕಾಲೇಜಿನ ನಿರ್ದೇಶಕ ಡಾ. ಎಂ.ಎನ್.ಚನ್ನಬಸಪ್ಪ, ಇಂದಿನ ಯುವ ಪೀಳಿಗೆ ಬಾಹ್ಯಾಕಾಶದ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳಬೇಕು. ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಭವಿಷ್ಯದಲ್ಲಿ ದೇಶದ ಬೆಳವಣಿಗೆಯಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
ಹಿರಿಯ ವಿಜ್ಞಾನಿ ಜಯಸಿಂಹ ಅವರು ಮಕ್ಕಳಿಗೆ ಬಾಹ್ಯಾಕಾಶದ ಹಲವು ಮೆರಗುಗಳ ಬಗ್ಗೆ ವಿವರಿಸಿದರು.
ಇಸ್ರೊ ವಿಜ್ಞಾನಿಗಳು, ಸಿಬ್ಬಂದಿ, ಎಸ್ಐಟಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿವಿಧ ಶಾಲೆಗಳ ಶಿಕ್ಷಕರು, ಪೋಷಕರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಇಸ್ರೊ ಹಿರಿಯ ವಿಜ್ಞಾನಿಗಳಾದ ಜಿ.ನಾಗೇಶ್, ಎಂ.ಎಸ್.ಶ್ರೀನಿವಾಸನ್, ಪ್ರಾಂಶುಪಾಲರಾದ ಡಾ.ಕೆ.ಪಿ.ಶಿವಾನಂದ, ಕಾಲೇಜಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಶಿವಕುಮಾರಯ್ಯ, ಕಾರ್ಯಕ್ರಮದ ಸಂಯೋಜಕರಾದ ಬಿ.ಎನ್.ಪ್ರಸಾದ್, ಎಸ್ಐಟಿ ಕಾಲೇಜಿನ ಯಾಂತ್ರಿಕ ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್. ಶಶಿಶೇಖರ್ ಇದ್ದರು.