ಕೊರಟಗೆರೆ: ಪಟ್ಟಣಕ್ಕೆ ನೀರು ಒದಗಿಸುವ ಜಂಪೇನಹಳ್ಳಿ ಕೆರೆಯನ್ನು ಬೇಸಿಗೆಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಆ ಮೂಲಕ ಇನ್ನಷ್ಟು ನೀರು ಸಂಗ್ರಹಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ಡಾ. ಜಿ.ಪರಮೇಶ್ವರ ಹೇಳಿದರು.
ಜಂಪೇನಹಳ್ಳಿ ಕೆರೆಗೆ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಿಸಿ ಮಾತನಾಡಿದರು.
ಕೆರೆಯಲ್ಲಿ ಹೂಳು ತುಂಬಿದೆ. ಬೇಸಿಗೆ ಯಲ್ಲಿ ಹೂಳು ಎತ್ತಿ, ಕೋಡಿಯನ್ನು ಇನ್ನಷ್ಟು ಎತ್ತರಿಸುವ ಕಾಮಗಾರಿಗೆ ಚಾಲನೆ ನೀಡಲಾಗುವುದು. ಗೌಡನಕೆರೆಯನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಅದರಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ತಾಲ್ಲೂಕಿನ 64 ಸಾವಿರ ಹೆಕ್ಟೇರ್ ಭೂಮಿ ಕೃಷಿ ಭೂಮಿಯಲ್ಲಿ ಈಗಾಗಲೇ ಶೇ 70ರಷ್ಟು ಬಿತ್ತನೆಯಾಗಿದೆ. ಗೊಬ್ಬರದ ಕೊರತೆಯಾಗಿದ್ದು, ಸಮರ್ಪಕ ಗೊಬ್ಬರ ಪೂರೈಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದರು.
ಎತ್ತಿನಹೊಳೆ ಯೋಜನೆಗೆ ಬೈರಗೊಂಡ್ಲು ಬಳಿ ₹ 5,000 ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ.ಆರ್. ಓಬಳರಾಜು, ಎ.ಡಿ. ಬಲರಾಮಯ್ಯ, ನಟರಾಜು, ನಾಗರಾಜು, ಇಒ ಲಕ್ಷ್ಮಣ್, ಮುಖಂಡರಾದ ಕೆ.ವಿ.ಮಂಜುನಾಥ್, ಚಿಕ್ಕರಂಗಯ್ಯ, ಎಲ್.ರಾಜಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ ಇದ್ದರು.