ತುಮಕೂರು: ‘ಸ್ಮಾರ್ಟ್ ಸಿಟಿ’ ಅಭಿವೃದ್ಧಿ ಕಾಮಗಾರಿಗೆ ನಗರದ ಅಶೋಕನಗರದಲ್ಲಿ ಭೂಮಿ ಅಗೆಯುವಾಗ ಬಿಎಸ್ಎನ್ಎಲ್ ಸಂಪರ್ಕ ಕೇಬಲ್ ಶುಕ್ರವಾರ ಬೆಳಿಗ್ಗೆ ತುಂಡರಿಸಿದ್ದು, ಈ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶದ 1200 ಬಿಎಸ್ಎನ್ಎಲ್ ಸ್ಥಿರ ದೂರವಾಣಿ ಸಂಪರ್ಕ ಕಡಿತಗೊಂಡಿದ್ದರಿಂದ ಬಳಕೆದಾರರು ಪರದಾಡಿದರು.
ಆಸ್ಪತ್ರೆ, ಬ್ಯಾಂಕುಗಳು, ವಾಣಿಜ್ಯ ಮಳಿಗೆಗಳು, ಪತ್ರಿಕಾ ಕಚೇರಿಗಳು, ಮನೆಗೆ ಸ್ಥಿರ ದೂರವಾಣಿ ಸಂಪರ್ಕ ಹೊಂದಿರುವ ಬಳಕೆದಾರರ ದೂರವಾಣಿಗಳು ರಿಂಗಣಿಸಲೇ ದಿನಪೂರ್ತಿ ರಿಂಗಣಿಸಲೇ ಇಲ್ಲ.
ಬೆಳಿಗ್ಗೆಯಿಂದಲೇ ಸಂಪರ್ಕ ಕಡಿತ ಆಗಿದ್ದರಿಂದ ದೂರವಾಣಿ, ಆನ್ಲೈನ್ ಸಂಪರ್ಕ ಸಾಧ್ಯ ವಾಗಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಸರಿಯಾಗಬಹುದು ಎಂದು ಭಾವಿಸಿದ ಬಳಕೆದಾರರು ನಂತರ ಪರದಾಡುವಂತಾಯಿತು. ಬಿಎಸ್ಎನ್ಎಲ್ ದೂರು ವಿಭಾಗಕ್ಕೆ ಇಡೀ ದಿನ ಈ ಬಡಾವಣೆ ಬಳಕೆದಾರರು ಕರೆ ಮಾಡಿ ವಿಚಾರಣೆ ಮಾಡುತ್ತಲೇ ಇದ್ದರು.
ಇಂದು ದುರಸ್ತಿ ಸಾಧ್ಯತೆ: ಸ್ಮಾರ್ಟ್ ಕಾಮಗಾರಿ ಕೈಗೊಳ್ಳುವಾಗ ಕೇಬಲ್ ತುಂಡರಿಸಿದ್ದು, 1200 ಸಂಪರ್ಕ ಮರು ಜೋಡಣೆಗೆ ಕಾಲಾವಕಾಶ ಬೇಕಾಗುತ್ತದೆ. ಶನಿವಾರ ದುರಸ್ತಿಯಾಗುವ ಸಾಧ್ಯತೆ ಇದೆ ಎಂದು ಬಿಎಸ್ಎನ್ಎಲ್ ದೂರು ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.