ತುಮಕೂರು: ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಬಿ.ಸಿ.ಕಾವಲ್ನ ತೋಟದ ಮನೆಯ ದನದ ಕೊಟ್ಟಿಗೆಯಲ್ಲಿ ಗೃಹಿಣಿ ಶಾಮಲಾ (28) ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ಬುಧವಾರ ತಡ ರಾತ್ರಿ ನಡೆದಿದೆ.
ಬಿ.ಸಿ.ಕಾವಲ್ನ ಮಂಜುನಾಥ್ ಜತೆ ರಾಗದೇವನಹಳ್ಳಿಯ ಶಾಮಲಾ ವಿವಾಹ ನಡೆದಿತ್ತು. ಮದುವೆಯಾಗಿ ಐದು ವರ್ಷಗಳಾಗಿದ್ದು, ದಂಪತಿಗೆ ಗಂಡು ಮಗುವಿದೆ.
ಮದುವೆಯಾದ ನಂತರ ಗಂಡ, ಹೆಂಡತಿ ನಡುವೆ ಜಗಳವಾಗುತ್ತಿದ್ದು ಎರಡು ಬಾರಿ ದಂಡಿನಶಿವರ ಪೊಲೀಸ್ ಠಾಣೆಯ ಮೆಟ್ಟಿಲೇರಿ, ರಾಜಿ ಸಂಧಾನವೂ ಕೂಡ ನಡೆದಿತ್ತು. ಶಾಮಲಾ ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ತವರು ಮನೆಯಿಂದ ಗಂಡನ ಮನೆಗೆ ಬಂದಿದ್ದರು.
‘ನನ್ನ ಅಕ್ಕನಿಗೆ ವರದಕ್ಷಿಣೆ ಕಿರುಕುಳ ನೀಡಿ ಗಂಡನ ಮನೆಯವರು ಸಾಯಿಸಿದ್ದಾರೆ’ ಎಂದು ಮೃತಳ ತಮ್ಮ ದರ್ಶನ್ ದಂಡಿನಶಿವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.