ತುಮಕೂರು:ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಮಹಾತ್ಮಗಾಂಧಿ ಸ್ಮಾರಕ ಭವನದಲ್ಲಿ ಮಹಾನಗರ ಪಾಲಿಕೆ ಸದಸ್ಯ ಗಿರಿಜಾ ಧನಿಯಾಕುಮಾರ್ ಅವರು ’ಗಾಂಧಿ ಕುರಿತು ಚಿತ್ರಕಲಾ ಸ್ಪರ್ಧೆ’ಯನ್ನು ಏರ್ಪಡಿಸಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ ಮಾತನಾಡಿ, 1933 ರಲ್ಲಿ ಗಾಂಧೀಜಿ ತುಮಕೂರಿಗೆ ಬಂದಾಗ ನಾನಿನ್ನು ಚಿಕ್ಕವ. ನಮ್ಮ ಮಂಡಿಗೆ ಬಂದಿದ್ದ ಕೆಲ ರೈತರು ನನ್ನನ್ನು ಅವರ ಹೆಗಲ ಮೇಲೆ ಕೂರಿಸಿಕೊಂಡು ಬಂದು ಗಾಂಧೀಜಿ ಅವರ ಭಾಷಣ ಕೇಳಿಸಿದ್ದರು. ಅದನ್ನು ನಾನು ಮರೆಯಲು ಸಾಧ್ಯವೇ ಇಲ್ಲ ಎಂದು ನೆನಪುಗಳನ್ನು ಹಂಚಿಕೊಂಡರು.
ಮಲ್ಲಸಂದ್ರದಲ್ಲಿ ಪಕ್ಷಾತೀತವಾಗಿ ಗಾಂಧೀಜಿ ಸೇವಾಶ್ರಮ ನಿರ್ಮಿಸಲು ಕಳೆದ ಮೂರು ವರ್ಷದಿಂದ ಪ್ರಯತ್ನ ಪಡುತ್ತಿದ್ದೇನೆ. ಇಂದಿನ ಮಕ್ಕಳು ಗಾಂಧೀಜಿಯನ್ನು ಓದಿಕೊಂಡಷ್ಟು ಅವರು ಅರ್ಥವಾಗುತ್ತಾ ಹೋಗುತ್ತಾರೆ ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಕನ್ನಡ ಸೇನೆಯ ಧನಿಯಕುಮಾರ್, ವೆಂಕಟಾಚಲ, ಮಂಜುಳ ಶ್ರೀಧರ್, ಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಎನ್.ಯೋಗೀಶ್ವರಪ್ಪ, ಕುಂದರನಹಳ್ಳಿ ರಮೇಶ್, ಸಿ.ಎಸ್.ಐ ಲೇಔಟ್ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.