ಪಾವಗಡ: ಸರ್ಕಾರದಿಂದ ನಿಡಗಲ್ ಉತ್ಸವ ಆಚರಿಸಲು ಆದೇಶ ನೀಡಬೇಕು ಎಂದು ವಾಲ್ಮೀಕಿ ಗುರುಪೀಠದ ಅಧ್ಯಕ್ಷ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ಮನವಿ ಮಾಡಿದರು.
ತಾಲ್ಲೂಕಿನ ನಿಡಗಲ್ ದುರ್ಗದಲ್ಲಿ ಶ್ರಾವಣ ಸೋಮವಾರದ ಪ್ರಯುಕ್ತ ನಡೆದ ನಿಡಗಲ್ ಉತ್ಸವಕ್ಕೆ ಅವರು ಮಾತನಾಡಿದರು.
ನಿಡಗಲ್ ದುರ್ಗ ಕಲೆ, ಸಾಹಿತ್ಯ, ಶಿಲ್ಪಕಲೆಗೆ ಹೆಸರುವಾಸಿಯಾಗಿದೆ. ಇಂತಹ ಐತಿಹಾಸಿಕ ಪ್ರದೇಶವನ್ನು ಸರ್ಕಾರ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಕ್ಷೇತ್ರವಾಗಿ ಘೋಷಿಸಬೇಕು. ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಹೇಳಿದರು.
ಸಂಘ, ಸಂಸ್ಥೆಗಳು ಪ್ರತಿವರ್ಷ ನಿಡಗಲ್ ಉತ್ಸವ ನಡೆಸುತ್ತಿರುವುದು ಶ್ಲಾಘನೀಯ. ಹಲವು ವರ್ಷಗಳಿಂದ ಸರ್ಕಾರಕ್ಕೆ ಉತ್ಸವ ನಡೆಸಲು ಆದೇಶ ನೀಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಪಾಳೆಗಾರ, ನಿಡಗಲ್ಲು ಹೋಬಳಿ ಘಟಕದ ಅಧ್ಯಕ್ಷ ಓಂಕಾರ ನಾಯಕ ಮಾತನಾಡಿದರು.