ತುಮಕೂರು: ವಿದ್ಯಾರ್ಥಿಗಳು ದೇಶದ ಸಂಪತ್ತಾಗಬೇಕು. ಅವರಲ್ಲಿ ನಿಯತ್ತು ಮತ್ತು ಶ್ರದ್ಧೆ ಬಹುಮುಖ್ಯವಾಗಿರಬೇಕು. ಮಕ್ಕಳು ದೇಶ ಪ್ರೀತಿಸುವ, ಸಂಸ್ಕೃತಿ ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ ನುಡಿದರು.
ನಗರದ ಶೇಷಾದ್ರಿಪುರಂ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ಪಿಯುಸಿ ತರಗತಿಗಳ ಉದ್ಘಾಟನೆ ಹಾಗೂ ಎಸ್ಇಟಿ ವಿದ್ಯಾರ್ಥಿ ವೇತನ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಮಕ್ಕಳಲ್ಲಿ ಹೃದಯವೈಶಾಲ್ಯ ಬೆಳೆಸಬೇಕು. ಸ್ವಾಮಿ ವಿವೇಕಾನಂದ, ಸರ್ ಸಿ.ವಿ.ರಾಮನ್ ಹಾಗೂ ಅಬ್ದುಲ್ ಕಲಾಂ ಅವರ ಬಾಲ್ಯ ಹಾಗೂ ಜೀವನಗಳು ನಮಗೆ ಪ್ರೇರಣೆ ಆಗಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಕಾರ್ಯದರ್ಶಿ ಡಾ. ವೂಡೇ ಪಿ.ಕೃಷ್ಣ, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ನಡೆದು ಬಂದ ದಾರಿ ಹಾಗೂ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ನೀಡುವ ಸೌಲಭ್ಯಗಳನು ಕುರಿತು ವಿವರಿಸಿದರು.
ವಿದ್ಯಾರ್ಥಿಗಳು ಪ್ರಜ್ಞಾವಂತರಾಗಬೇಕು. ಸಮಾಜದ ಅಭಿವೃದ್ಧಿಯಲ್ಲಿ ಅವರ ಪಾತ್ರ ಬಹುಮುಖ್ಯವಾದುದು. ನೀವು ಮಾಡುವ ಕೆಲಸದಿಂದ ನೀವು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 85ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ಕಾಲೇಜಿನ 150 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ತಲಾ ₹ 10 ಸಾವಿರದ ಚೆಕ್ ವಿತರಿಸಲಾಯಿತು.
ಶೇಷಾದ್ರಿಪುರಂ ಶಿಕ್ಷಣ ದತ್ತಿ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ, ಉಪಾಧ್ಯಕ್ಷ ಟಿ.ಎಸ್. ಹೆಂಜಾರಪ್ಪ, ಸಹ ಕಾರ್ಯದರ್ಶಿ ಎಂ.ಎಸ್.ನಟರಾಜು, ಧರ್ಮದರ್ಶಿ ಮುದ್ದುಕೃಷ್ಣ, ಡಬ್ಲ್ಯೂ.ಡಿ. ಅಶೋಕ್, ಪರಮಶಿವಯ್ಯ, ಬಿ.ಎ.ಅನಂತರಾಮ್, ಪ್ರಾಂಶುಪಾಲರಾದ ಬಿ.ವಿ. ಬಸವರಾಜು, ಜಿ.ಟಿ.ಜಗದೀಶ, ನಂದರಾಜ್, ಉಪನ್ಯಾಸಕರು ಹಾಗೂ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.