ಹಾಗಲವಾಡಿ: ಗುಬ್ಬಿ ತಾಲ್ಲೂಕಿನ ಮಠದಕೆರೆ, ಹೇಮಾದ್ರಿ ಹಾಗೂ ಶೇಷನಹಳ್ಳಿ ಕೆರೆಗಳಿಗೆ ಹೇಮಾವತಿ ನೀರು ಹರಿಸುವ ಯೋಜನೆಗೆ ಚಾಲನೆ ಸಿಗುವವರೆಗೂ ಚುನಾವಣಾ ಬಹಿಷ್ಕಾರ ತೀರ್ಮಾನ ಕೈಬಿಡುವುದಿಲ್ಲ ಎಂದು ಮುಖಂಡ ಶಿವಲಿಂಗಯ್ಯ ಸ್ಪಷ್ಟಪಡಿಸಿದರು.
ಅಂಕಸಂದ್ರ ಹಾಗೂ ಮಂಚಲದೊರೆಯ 36 ಸದಸ್ಯ ಬಲದ ಎರಡೂ ಗ್ರಾಮಪಂಚಾಯಿತಿಗಳಲ್ಲಿ ಉಮೇದುವಾರಿಕೆ ಸಲ್ಲಿಸುವ ಹಂತದಲ್ಲೇ ಕೈಗೊಂಡಿರುವ ಚುನಾವಣಾ ಬಹಿಷ್ಕಾರ ತೀರ್ಮಾನ ಹಿಂಪಡೆಯುವಂತೆ ಶುಕ್ರವಾರ ತುಮಕೂರು ಉಪವಿಭಾಗಾಧಿಕಾರಿ ಅಜಯ್ ಅವರು ಮಾಡಿದ ಮನವಿ ತಿರಸ್ಕರಿಸಿ ಮಾತನಾಡಿದರು.
ನೀರು ಹರಿಸುವ ಕಾಮಗಾರಿ ಕೊನೆಯಹಂತದಲ್ಲಿದೆ. ಹಣಕಾಸಿನ ಕೊರತೆಯಿಂದ ಸ್ಥಗಿತವಾಗಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಶೀಘ್ರ ನೀರು ಹರಿಸಲಾಗುವುದು ಎಂದು ಅಜಯ್ ಹೇಳಿದರು.
ನಾಮ ಪತ್ರ ಸಲ್ಲಿಸುವ ಕೊನೆ ದಿನವಾದ ಶುಕ್ರವಾರ ಮಂಚಲದೊರೆ ಗ್ರಾಪಂ ಬಳಿ ಮಾತನಾಡಿದ ಅವರು ಅಂಕಸಂದ್ರ ಹಾಗೂ ಮಂಚಲದೊರೆ ಚುನಾವಣೆಗಳಿಗೆ ಯಾರೊಬ್ಬರೂ ನಾಮಪತ್ರ ಸಲ್ಲಿಸದಿರುವ ಕಾರಣ ಚುನಾವಣೆ ನಿಂತು ಹೋಗಿದೆ. ಈ ಬಹಿಷ್ಕಾರ ತಾಲ್ಲೂಕಿನ ಅಭಿವೃದ್ಧಿಯ ಸಂಕೇತವಾಗಿದೆ. ಈ ಭಾಗದ ಕೆರೆಗಳಿಗೆ ನೀರು ಹರಿಸುವ ಯೋಜನೆಗಳನ್ನ ತಡೆಹಿಡಿದಿರುವ ಸರ್ಕಾರದ ಧೋರಣೆ ಖಂಡಿಸಿ ಈ ಬಹಿಷ್ಕಾರ ಮಾಡಲಾಗಿದೆ. ನೀರಿನ ಹಂಚಿಕೆಯಾಗದ ಮದಲೂರು ಕೆರೆಗೆ ಹೇಮಾವತಿ ಹೋಗುವುದಾದರೆ 2003ರಲ್ಲಿಯೇ ಮಠದ ಕೆರೆಗೆ ನೀರು ಹಂಚಿಕೆಯಾಗಿದ್ದರೂ, ನೀರು ಹರಿಸದಿರುವ ಸರ್ಕಾರ ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಶಿವಣ್ಣ, ಸೋಮಣ್ಣ, ನಾಗರಾಜು, ಗಡ್ಡ ರಮೇಶ್ ಅಂಕಸಂದ್ರ ಪಂಚಾಯತಿಯ ದಾಸಪ್ಪನಹಳ್ಳಿ ಮಂಜೇಗೌಡ, ಗುತ್ತಿಗೆದಾರ ಶೇಷನಹಳ್ಳಿ ಮಂಜಣ್ಣ ಇದ್ದರು.