ಬಂಗಾರಪೇಟೆ: ತಾಲ್ಲೂಕಿನ ದೊಡ್ಡಪನ್ನಾಡಹಳ್ಳಿ ಗ್ರಾಮದ ನಿವಾಸಿ ಧರ್ಮೋಜಿರಾವ್ (55) ಆನೆ ದಾಳಿಯಿಂದ ಮೃತಪಟ್ಟಿದ್ದಾರೆ.
ಗ್ರಾಮದ ಹೊರವಲಯದ ತೋಟದ ಗುಡಿಸಲಿನಲ್ಲಿ ಇದ್ದ ನಾಯಿಗಳಿಗೆ ಊಟ ತೆಗೆದುಕೊಂಡುಹೋಗುತ್ತಿದ್ದ ಸಮಯದಲ್ಲಿ ಆನೆ ದಾಳಿ ನಡೆಸಿದೆ.
ಧರ್ಮೋಜಿರಾವ್ ನಿತ್ಯ ತೋಟದ ಗುಡಿಸಲಿನಲ್ಲಿ ಮಲಗುತ್ತಿದ್ದರು. ಮಂಗಳವಾರ ರಾತ್ರಿ ಸುಮಾರು 9 ಗಂಟೆ ವೇಳೆ ಗುಡಿಸಲಿಗೆ ತೆರಳುತ್ತಿದ್ದ ಸಂದರ್ಭ ಮಾರ್ಗ ಮಧ್ಯದಲ್ಲಿ ಆನೆ ದಾಳಿ ನಡೆಸಿದೆ. ಬುಧವಾರ ಮಧ್ಯಾಹ್ನ 3 ಗಂಟೆಗೆ ಮೃತರ ಪತ್ನಿ ಗುಡಿಸಿಲು ಬಳಿ ಬಂದಾಗ ವಿಷಯ ತಿಳಿದಿದೆ.
ಸ್ಥಳಕ್ಕೆ ಡಿಸಿಎಫ್ ಶಿವಶಂಕರ್ ಭೇಟಿ ನೀಡಿದ್ದರು. ಆನೆ ದಾಳಿಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ₹7.5 ಲಕ್ಷ ಪರಿಹಾರ ನೀಡುವುದಾಗಿ ವಲಯ ಸಂರಕ್ಷಣಾಧಿಕಾರಿ ಸಂತೋಶ್ ಕುಮಾರ್ ತಿಳಿಸಿದ್ದಾರೆ.
‘ಬಲಮಂದೆ ಮತ್ತು ಗುಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಯಡಿ ವಾರದಿಂದ ಸುತ್ತಾಡಿರುವ ಆನೆಗಳು ಅಪಾರ ಬೆಳೆ ನಾಶಮಾಡಿವೆ. ಆನೆ ದಾಳಿಯಿಂದ ಶಾಶ್ವತ ಪರಿಹಾರ ನೀಡುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಮೂತನೂರು ಗ್ರಾಮದ ಮಲ್ಲೇಶಗೌಡ ದೂರಿದರು.