ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಹೆದ್ದಾರಿಗೆ 11 ಸಾವಿರ ಮರಗಳು ಬಲಿ

ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ ಮರಗಳ ಹನನ
Last Updated 14 ಜನವರಿ 2021, 19:30 IST
ಅಕ್ಷರ ಗಾತ್ರ

ತುಮಕೂರು: ಬಯಲು ಸೀಮೆಯ ತುಮಕೂರು ಜಿಲ್ಲೆಯಲ್ಲಿ ಹಾದು ಹೋಗಿರುವ ಮೂರು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಒಂದು ರಾಜ್ಯ ಹೆದ್ದಾರಿಯ ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ ಹಾಗೂ ನಗರದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳಿಗಾಗಿ 2020ನೇ ಸಾಲಿನಲ್ಲಿ ಸರ್ಕಾರಿ ಜಮೀನಿನಲ್ಲಿದ್ದ ಮತ್ತು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟ 11 ಸಾವಿರಕ್ಕೂ ಹೆಚ್ಚು ಮರಗಳು ಹನನವಾಗಿವೆ.

ಅಭಿವೃದ್ಧಿಯ ಹೆಸರಿನಲ್ಲಿ ಈ ಮರ ಕಡಿಯುವ ಪ್ರಕ್ರಿಯೆ ಇನ್ನೂ ಮುಂದುವರಿದಿದೆ. ಮರ ಕಡಿಯಲು ಅನುಮತಿ ಕೋರಿ ಅರಣ್ಯ ಇಲಾಖೆಗೆ ಪ್ರಸ್ತಾವಗಳು ಸಲ್ಲಿಕೆಯಾಗುತ್ತಲೇ ಇವೆ.

ಕಲ್ಪತರು ನಾಡು ಖ್ಯಾತಿಯ ಜಿಲ್ಲೆಯ ಪರಿಸರದ ಮೇಲೆ ಮರಗಳ ಹನನ ಗಂಭೀರ ಪರಿಣಾಮ ಬೀರುವ ಆತಂಕವನ್ನು ಪರಿಸರಪ್ರಿಯರು ವ್ಯಕ್ತಪಡಿಸುತ್ತಿದ್ದಾರೆ. ತುಮಕೂರು ನಗರದಲ್ಲಿ ‘ಅಪ್ಪಿಕೊ’ ಮಾದರಿಯ ಚಳವಳಿಗಳು ಸಹ ನಡೆದಿದ್ದವು. ಆದರೆ ಇವರ ಕೂಗು ಅರಣ್ಯ ರೋದನವಾಯಿತಷ್ಟೇ.

‘ಅರಣ್ಯ ಇಲಾಖೆಯು ನಿಯಮಾನುಸಾರ ತೆರಿಗೆಯನ್ನು ಕಟ್ಟಿಸಿಕೊಂಡು 11,333 ಮರಗಳನ್ನು ಕಡಿಯಲು ಅನುಮತಿ ನೀಡಿದೆ. ಈಗಾಗಲೇ ಬಹಳಷ್ಟು ಮರಗಳನ್ನು ಕಡಿಯಲಾಗಿದೆ. ಮತ್ತಷ್ಟು ಮರಗಳು ಕಡಿಯುವ ಹಂತದಲ್ಲಿವೆ. ಖಾಸಗಿ ಜಮೀನುಗಳ ಮರಗಳನ್ನೂ ಲೆಕ್ಕಹಾಕಿದರೆ ಇದರ ಮೂರು ಪಟ್ಟು ಮರಗಳು ಧರೆಗೆ ಉರುಳಿವೆ’ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

‘ಅಭಿವೃದ್ಧಿಗಾಗಿ ಮರ ಕಡಿಯುವುದು ಅನಿವಾರ್ಯ ಎನ್ನುವಂತೆ ಆಗಿದೆ. ಅನುಮತಿ ಕೊಡುವುದು ಸ್ವಲ್ಪ ತಡವಾದರೂ ಅರಣ್ಯ ಇಲಾಖೆಯವರು ಅಭಿವೃದ್ಧಿ ವಿರೋಧಿಗಳು ಎಂದು ಜನಪ್ರತಿನಿಧಿಗಳು ದೂರುತ್ತಾರೆ’ ಎಂದು ಇಲಾಖೆ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ಕುಣಿಗಲ್, ಗುಬ್ಬಿ, ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಮರಗಳನ್ನು ಕಡಿಯಲಾಗಿದೆ. ರಾಜ್ಯದಲ್ಲಿಯೇ ತೀವ್ರ ಅಂತರ್ಜಲ ಕುಸಿದಿರುವ ತಾಲ್ಲೂಕುಗಳಲ್ಲಿ ಚಿಕ್ಕನಾಯಕನಹಳ್ಳಿ ಎರಡನೇ ಸ್ಥಾನದಲ್ಲಿದೆ.

ಯಾವ ಯೋಜನೆ:ಎಷ್ಟು ಮರಕ್ಕೆ ಕೊಡಲಿ
* ತುಮಕೂರು ತಾಲ್ಲೂಕು ಮಲ್ಲಸಂದ್ರದಿಂದ ತಿಪಟೂರುವರೆಗೆ ರಾಷ್ಟ್ರೀಯ ಹೆದ್ದಾರಿ 206ರ ವಿಸ್ತರಣೆ;
6,537 ಮರ
* ಬೀದರ್– ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150ಎ ವಿಸ್ತರಣೆ; 2,400 ಮರ
* ಮಂಗಳೂರು– ವಿಶಾಖಪಟ್ಟಣ ರಾಷ್ಟ್ರೀಯ ಹೆದ್ದಾರಿ 234ರ ವಿಸ್ತರಣೆ; 914 ಮರ
* ಮಾಗಡಿ– ಸೋಮವಾರಪೇಟೆ ರಾಜ್ಯ ಹೆದ್ದಾರಿ ಅಭಿವೃದ್ಧಿ; 1,322 ಮರ
* ತುಮಕೂರು- ನಗರದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ;160 ಮರ

10 ಸಸಿ ನಾಟಿ
ಒಂದು ಮರ ಕಡಿದರೆ ಅದಕ್ಕೆ ಪ್ರತಿಯಾಗಿ 10 ಸಸಿಗಳನ್ನು ಬೆಳೆಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರತಿ ಸಸಿ ಬೆಳೆಸಲು ಅರಣ್ಯ ಇಲಾಖೆಗೆ ₹ 373 ನೀಡುತ್ತದೆ. ಹೆದ್ದಾರಿ ಕಾಮಗಾರಿ ಪೂರ್ಣವಾದ ನಂತರ ಇವುಗಳ ಎರಡೂ ಬದಿಯಲ್ಲಿ ಸಸಿಗಳನ್ನು ನೆಡಲಾಗುವುದು’ ಎಂದು ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಗಿರೀಶ್ ಮಾಹಿತಿ ನೀಡಿದರು.

‘ಇದರ ಜತೆಗೆ ಹೆದ್ದಾರಿಯ ಎರಡೂ ಬದಿಯಲ್ಲಿ ಸಸಿಗಳನ್ನು ನೆಡಲು ಪ್ರತಿ ಒಂದು ಕಿ.ಮೀ.ಗೆ ಹೆದ್ದಾರಿ ಪ್ರಾಧಿಕಾರದವರು ₹ 3 ಲಕ್ಷ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT