ತುಮಕೂರು: ಸಿಪಿಐ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಶಾಖೆಗಳನ್ನು ತೆರೆದು ತಿಂಗಳಿಗೊಮ್ಮೆ ಸಭೆ ನಡೆಸಿ ಹೋರಾಟಗಳನ್ನು ರೂಪಿಸಬೇಕು ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು.
ಭಾನುವಾರ ನಗರದಲ್ಲಿ ನಡೆದ ತುಮಕೂರು ಜಿಲ್ಲಾ ಘಟಕದ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಗೆ ಅಗತ್ಯವಾಗಿರುವ ಕುಡಿಯುವ ನೀರಿನ ಹೋರಾಟವನ್ನು ಮೊದಲ ಆದ್ಯತೆಯಾಗಿ ತೆಗೆದುಕೊಳ್ಳಬೇಕು. ಭೂಮಿ ಮತ್ತು ವಸತಿಗೆ ಹೋರಾಟ ರೂಪಿಸಬೇಕು ಎಂದು ಸೂಚಿಸಿದರು.
ಯಾವುದೇ ಜಾತಿ, ಪಕ್ಷ ಭೇದವಿಲ್ಲದೇ ಕಾರ್ಮಿಕರು, ಯುವಕರು, ಅಲ್ಪಸಂಖ್ಯಾತರು, ದುಡಿಯುವ ವರ್ಗದವರನ್ನು ಹೊಂದಿರುವ ಏಕೈಕ ಪಕ್ಷವೆಂದರೆ ಸಿಪಿಐ ಮಾತ್ರ. ಸ್ವಾತಂತ್ರ್ಯಕ್ಕೆ ಹೋರಾಟವನ್ನು ನಡೆಸಿದ ಪಕ್ಷವಾಗಿದೆ. ಅಂದಿನಿಂದ ಇಂದಿನವರೆಗೂ ಅದೇ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಪೂರ್ವದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ. ಕಪ್ಪು ಹಣ ವಾಪಸ್ ತರುತ್ತೇವೆ ಎಂದು ಹೇಳಿದ್ದರು. ಯಾವ ಭರವಸೆಯನ್ನೂ ಈಡೇರಿಸಿಲ್ಲ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಹಾಘಟಬಂಧನದಲ್ಲಿ ಉಂಟಾದ ಬಿರುಕು ಮತ್ತು ಸೈನಿಕರ ಹೆಸರಿನಲ್ಲಿ ನಡೆಸಿದ ಪ್ರಚಾರದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರ ನಡೆಸುವಂತಾಗಿದೆ ಎಂದು ವಿವರಿಸಿದರು.
ಎಐಕೆಎಸ್ನ ರಾಜ್ಯ ಕಾರ್ಯದರ್ಶಿ ಪಾಲ್ವನಹಳ್ಳಿ ಪ್ರಸನ್ನಕುಮಾರ್, ಜಿಲ್ಲಾ ಕಾರ್ಯದರ್ಶಿ ಗಿರೀಶ್, ಖಜಾಂಚಿ ಕಂಬೇಗೌಡ ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಜಿಲ್ಲಾ ಸಹಕಾರ್ಯದರ್ಶಿ ಅಶ್ವತ್ಥ್ನಾರಾಯಣ, ಕಾಂತರಾಜು, ಶಶಿಕಾಂತ್, ನಾಗಣ್ಣ ಇದ್ದರು.