ತಿಪಟೂರು: ಆಚರಣೆ ಮತ್ತು ಸಂಸ್ಕೃತಿಯಲ್ಲಿ ಪರಿಸರ ರಕ್ಷಣೆಯ ಪಾಠಗಳು ಹೇರಳವಾಗಿದ್ದು, ವಿದ್ಯಾರ್ಥಿಗಳು ಅರಿತುಕೊಳ್ಳಬೇಕಾಗಿದೆ ಎಂದು ಸ್ನೇಹ ಸೇವಾಶ್ರಮದ ಅಧ್ಯಕ್ಷ ಗುರುಪ್ರಸಾದ್ ತಿಳಿಸಿದರು.
ನಗರದ ಬಿಆರ್ಎಸ್ ಸಭಾಂಗಣದಲ್ಲಿ ಸ್ನೇಹ ಸೇವಾಶ್ರಮ ಸಂಸ್ಥೆಯಿಂದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ‘ಪರಿಸರ ಉಳಿಸಿ ಬೆಳೆಸುವಲ್ಲಿ ಭಾರತೀಯ ಸಂಸ್ಕೃತಿಯ ಪಾತ್ರ’ ಎಂಬ ಪ್ರಬಂಧ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂಸ್ಕೃತಿಯಲ್ಲಿ ಪ್ರಕೃತಿ ಮಾತೆಗೆ ಬಹುಮುಖ್ಯ ಸ್ಥಾನ ನೀಡಲಾಗಿದೆ. ಪ್ರಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಾಚೀನರ ಕೊಡುಗೆಯೂ ಅಪಾರವಾಗಿದೆ ಎಂದರು.
ಶಿಕ್ಷಣ ಇಲಾಖೆಯ ಬಿಆರ್ಸಿ ಯೋಗಾನರಸಿಂಹಸ್ವಾಮಿ ಮಾತನಾಡಿ, ‘ಪ್ರಕೃತಿ ಮತ್ತು ಮಾನವನಿಗೆ ಅವಿನಾಭಾವ ಸಂಬಂಧವಿದೆ. ಸಂಸ್ಕೃತಿಯಲ್ಲಿ ಬರುವ ಆಚರಣೆಗಳು ಪ್ರಕೃತಿ ಆರಾಧನೆಯ ಭಾಗವಾಗಿವೆ’ ಎಂದು ಆಶಯವ್ಯಕ್ತಪಡಿಸಿದರು.
ಸಂಘದ ಕಾರ್ಯದರ್ಶಿ ಸಂತೋಷ್ ಕುಮಾರ್ ಅವರು, ‘ಸ್ಪರ್ಧೆಯಲ್ಲಿ 100 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ಅನುಕ್ರಮವಾಗಿ ₹ 3001, ₹ 2001, ₹ 1001 ಸಾವಿರ ನಗದು ಬಹುಮಾನ, ಇಬ್ಬರಿಗೆ ತಲಾ ₹ 501 ರನ್ನು ಸಮಾಧಾನಕರ ಬಹುಮಾನ ನೀಡಲಾಗಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್, ಪಿಡಿಓ ಹನುಮರಾಜು, ವೇದಮೂರ್ತಿ, ತಾಪಂ ನೌಕರರಾದ ಚಂದ್ರಕಲಾ, ಕುಮಾರಸ್ವಾಮಿ ಹಾಗೂ ರುಕೋಧರ ಇದ್ದರು.