ಕೊಡಿಗೇನಹಳ್ಳಿ: ಹೋಬಳಿಯ ಚಿಕ್ಕಮಾಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಚೈತನ್ಯ ಸಿಂಚನ ಟ್ರಸ್ಟ್ನಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ವಿಷಯವಾರು ಸ್ಕೋರಿಂಗ್ ಪ್ಯಾಕೇಜ್ ವಿಶ್ಲೇಷಣೆ ಮತ್ತು ಪರೀಕ್ಷಾ ಎದುರಿಸುವ ಕುರಿತು ಉಪನ್ಯಾಸ, ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಚಿಕ್ಕಮಾಲೂರಿನ 72 ವಿದ್ಯಾರ್ಥಿಗಳು, ಕೊಂಡವಾಡಿಯ 26 ವಿದ್ಯಾರ್ಥಿಗಳು, ಜಿಜೆಸಿ ಪುರವರದ 53 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸುದ್ದೇಕುಂಟೆ ಪ್ರೌಢಶಾಲೆಯಲ್ಲಿ ಸುಮಾರು 150 ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಪರಿಣತ ಶಿಕ್ಷಕರಿಂದ ಮಾರ್ಗದರ್ಶನ ನೀಡಲಾಯಿತು.
ಚೈತನ್ಯ ಸಿಂಚನ ಸಂಸ್ಥೆ ಸಂಸ್ಥಾಪಕ ಸಿ.ವಿ. ಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ ಭಯದಿಂದ ಹೊರಬರಬೇಕಿದೆ. ಜೊತೆಗೆ, ಅವರಿಂದ ಉತ್ತಮ ಫಲಿತಾಂಶ ಹೊರಹೊಮ್ಮಿಸಲು ಪ್ರತಿವರ್ಷ ಚೈತನ್ಯ ಸಿಂಚನ ಟ್ರಸ್ಟ್ನಿಂದ ಪರೀಕ್ಷೆಗೂ ಮುಂಚೆ ವಿವಿಧ ವಿಷಯಗಳ ಪರಿಣತ ಬೋಧಕರಿಂದ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲಾಗುತ್ತಿದೆ ಎಂದು ತಿಳಿಸಿದರು.
ನಿರ್ದೇಶಕರಾದ ಸೀತಾರಾಮ್, ನಾಗೇಂದ್ರ, ಸಿ.ಎಸ್. ಪಾರ್ಥಸಾರಥಿ, ನಂಜರಾಜ್ ಅರಸ್, ವಿಜ್ಞಾನ ವಿಷಯ ಪರಿವೀಕ್ಷಕ ಶಂಕರ್ ಪ್ರಸಾದ್, ಗಣಿತ ಶಿಕ್ಷಕ ಮೈಸೂರು ಮರಿಮಲ್ಲಪ್ಪ ಇದ್ದರು.