ತುಮಕೂರು: ಬಿಜೆಪಿಯವರಿಗೆ ತಾಕತ್ತಿದ್ದರೆ ಧರ್ಮ, ಜಾತಿ, ಹಿಂದುತ್ವ ಹೊರಗಿಟ್ಟು ಚುನಾವಣೆ ಎದುರಿಸಲಿ ಎಂದು ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ ಜಿ.ಸಿ.ಚಂದ್ರಶೇಖರ್ ಸವಾಲು ಹಾಕಿದರು.
ಬಿಜೆಪಿ ಸರ್ಕಾರ ದೇಶದಲ್ಲಿ ಯಾವೊಂದು ಅಭಿವೃದ್ಧಿ ಕಾರ್ಯ ಮಾಡದೇ, ಕೇವಲ ಚುನಾವಣೆ ಹೇಗೆ ಗೆಲ್ಲಬೇಕು ಎಂಬುದರ ಬಗ್ಗೆ ಮಾತ್ರವೇ ಗಮನ ಹರಿಸುತ್ತಿದೆ. ಇದಕ್ಕಾಗಿ ಧರ್ಮ, ಜಾತಿ, ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಕರ್ನಾಟಕ 3ನೇ ಅತಿಹೆಚ್ಚು ತೆರಿಗೆ ಕಟ್ಟುತ್ತಿರುವ ರಾಜ್ಯವಾಗಿದೆ. ಆದರೆ, ಅನುದಾನ ಹಂಚಿಕೆಯಲ್ಲಿ ಕೇಂದ್ರ ಮಲತಾಯಿ ಧೋರಣೆ ಮಾಡುತ್ತಿದೆ. ಇತ್ತೀಚೆಗೆ ಸಂಭವಿಸಿದ ನೆರೆಯಿಂದ ರಾಜ್ಯ ಬಿಜೆಪಿ ಸರ್ಕಾರವೇ ₹35 ಸಾವಿರ ಕೋಟಿ ನಷ್ಟದ ವರದಿ ಸಲ್ಲಿಸಿದೆ. ಆದರೆ, ಕೇಂದ್ರ ಬಿಡಿಗಾಸು ಎಂಬಂತೆ ₹1869 ಕೋಟಿ ಪರಿಹಾರ ನೀಡಿದೆ. ರಾಜ್ಯದ 25 ಸಂಸದರು ಈ ಬಗ್ಗೆ ಮಾತನಾಡದೆ ಜನರಿಗೆ ದ್ರೋಹ ಮಾಡುತ್ತಿದ್ದಾರೆ ಎಂದರು.
ರಾಜ್ಯ ಬಿಜೆಪಿಯಲ್ಲಿ ಒಡಕು ಮೂಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧವೇ ಸ್ಪಪಕ್ಷಿಯರು ಪತ್ರ ಸಮರ ಆರಂಭಿಸಿದ್ದಾರೆ. ಯಡಿಯೂರಪ್ಪ ಕೆಳಗಿಳಿದರೆ ಸರ್ಕಾರವೇ ಬೀಳಲಿದೆ ಎಂದು ಭವಿಷ್ಯ ನೀಡಿದರು.