ಕೊರಟಗೆರೆ: ತಾಲ್ಲೂಕಿನಲ್ಲಿ ಅರ್ಹ ರೈತರಿಗೆ ಸಾಗುವಳಿ ಪತ್ರ ನೀಡುವಲ್ಲಿ ತಾರತಮ್ಯ ಎಸಗಲಾಗಿದೆ. ಹೊರಗಿನಿಂದ ಬಂದವರಿಗೆ ಸಾಗುವಳಿ ಪತ್ರ ನೀಡಲಾಗಿದೆ. ಸುಮಾರು ನಲವತ್ತು ವರ್ಷದಿಂದ ವ್ಯವಸಾಯ ಮಾಡುತ್ತಿರುವ ಸ್ಥಳೀಯ ರೈತರಿಗೆ ಹಕ್ಕುಪತ್ರ ನೀಡದೆ ಬಗರ್ ಹುಕುಂ ಸಮಿತಿ ಅನ್ಯಾಯ ಮಾಡಿದೆ ಎಂದು ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡ್ಲಹಳ್ಳಿ ಸಿದ್ದರಾಜು ಆರೋಪಿಸಿದರು.
ತಾಲ್ಲೂಕು ಕಚೇರಿಗೆ ಸೋಮವಾರ ರೈತರೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ವೇಳೆ ಅವರು ಮಾತನಾಡಿದರು.
ಬಗರ್ ಹುಕುಂ ಸಮಿತಿಯಿಂದ 2017-18ರಲ್ಲಿ ಸಾಗುವಳಿ ಚೀಟಿ ನೀಡಿದ 250ಕ್ಕೂ ಹೆಚ್ಚು ರೈತರಿಗೆ ಇನ್ನೂ ಜಮೀನಿನ ಪಹಣಿ ಮಾಡಿಕೊಟ್ಟಿಲ್ಲ. ತಾಲ್ಲೂಕಿನಲ್ಲಿ ಸುಮಾರು 1,500 ರೈತರಿಗೆ ಸಾಗುವಳಿ ಪತ್ರ ನೀಡುವುದು ಬಾಕಿ ಇದೆ ಎಂದರು.
2022ರ ಹೊಸ ಕಮಿಟಿಯು ರೈತರಿಗೆ ತಾರತಮ್ಯ ಎಸಗಿದೆ. ಭ್ರಷ್ಟಾಚಾರವೂ ನಡೆದಿದೆ. ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ರೈತ ಸಂಘದಿಂದ ದೂರು ಸಲ್ಲಿಸಲಾಗುವುದು. ಕ್ಷೇತ್ರದ ಶಾಸಕರು ಈ ಬಗ್ಗೆ ಗಮನಹರಿಸಿ ಕೂಡಲೇ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು. ಇದು ಮುಂದುವರಿದರೆ ರೈತರು ಮತದಾನ ಬಹಿಷ್ಕರಿಸಲಿದ್ದಾರೆ ಎಂದು ಎಚ್ಚರಿಸಿದರು.
ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ವಿಜಯಮ್ಮ ಮಾತನಾಡಿ, ಸಾಗುವಳಿ ಪತ್ರ ಮತ್ತು ಮನೆ ಹಕ್ಕುಪತ್ರ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ. ಬೆಂಗಳೂರು ಮತ್ತು ತುಮಕೂರಿನ ಉದ್ಯಮಿಗಳಿಗೆ ಜಮೀನು ಮಂಜೂರು ಮಾಡಲಾಗಿದೆ. ತಾಲ್ಲೂಕಿನ ನಿಜವಾದ ರೈತರಿಗೆ ಹಕ್ಕುಪತ್ರ ನೀಡಿಲ್ಲ. ತಾಲ್ಲೂಕಿನ ರೈತರಿಗೆ ಭೂಮಿ ಸಿಗುವವರೆಗೆ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.