ತುಮಕೂರು: ನಗರದ ಕೋತಿತೋಪು ರಸ್ತೆಯ ತಿಮ್ಮರಾಜು ಎಂಬುವರ ಮನೆಯಲ್ಲಿ ಸಂಗ್ರಹಿಸಿದ್ದ ಪಟಾಕಿಗೆ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಭಸ್ಮವಾಗಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
‘ಮನೆಯಲ್ಲಿ ಪಟಾಕಿ ಸಂಗ್ರಹಿಸಿ ದ್ದರು. ಇದಕ್ಕೆ ಬೆಂಕಿ ತಗುಲಿದ ಪರಿಣಾಮ ಅವಘಡ ನಡೆದಿದೆ. ಅರ್ಧದಷ್ಟು ಪಟಾಕಿಗಳು ಹಾಗೂ ದಿನಬಳಕೆ ಸಾಮಗ್ರಿಗಳು ಹಾಳಾಗಿವೆ. ಅರ್ಧದಷ್ಟು ಪಟಾಕಿಗೆ ನೀರು ಹೊಡೆದ ಪರಿಣಾಮ ಹೆಚ್ಚಿನ ಅವಘಡ ಸಂಭವಿಸಿಲ್ಲ’ ಎಂದು ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದರು.
‘ಪೊಲೀಸ್ ಕಂಟ್ರೋಲ್ ರೂಂ ಮತ್ತು ಸಾರ್ವಜನಿಕರು ಕರೆಮಾಡಿ ಅವಘಡದ ಬಗ್ಗೆ ಮಾಹಿತಿ ನೀಡಿದರು. ತಕ್ಷಣವೇ ಕ್ರಮಕೈಗೊಂಡ ಪರಿಣಾಮ ಹೆಚ್ಚಿನ ಅನಾಹುತ ಆಗಿಲ್ಲ. ಇಲ್ಲಿ ನಿಯಮಬಾಹಿರವಾಗಿ ಪಟಾಕಿಗಳನ್ನು ಸಂಗ್ರಹಿಸಲಾಗಿತ್ತು’ ಎಂದಿದ್ದಾರೆ.
ತನ್ನ ಅಂಗಡಿಯಲ್ಲಿ ಮಾರಲು ಮನೆಯಲ್ಲಿ ಅಕ್ರಮವಾಗಿ ಪಟಾಕಿಯನ್ನು ತಿಮ್ಮರಾಜು ಇಟ್ಟಿದ್ದರು ಎನ್ನಲಾಗಿದೆ. ಹೊಸಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.