ತುಮಕೂರು: ಮಗು ಬಲಿ ಪಡೆದಿರುವ ಚಿರತೆಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ನಾಳೆಯೇ ಅಧಿಕಾರಿಗಳಿಗೆ ಅದೇಶ ನೀಡುತ್ತೇನೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದರು.
ಒಂದು ಅಥವಾ ಎರಡು ಘಟನೆಗಳಾಗಿದ್ದರೆ ಸುಮ್ಮನೆ ಇರಬಹುದಿತ್ತು. ಆದರೆ, ಈಗಾಗಲೇ ನಾಲ್ಕು ಮುಂದಿಯನ್ನು ಚಿರತೆ ಬಲಿ ಪಡೆದಿದೆ. ಹಾಗಾಗಿ ಕಾನೂನು ತೊಡಕಿಗಿಂತ ನಮಗೆ ಜನರ ಪ್ರಾಣ ಮುಖ್ಯ. ಯಾವುದೇ ಕಾನೂನು ಸಮಸ್ಯೆ ಎದುರಾದರೂ ಈ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಎಂದರು.
ಈ ಸಂದರ್ಭ ಅವರು ಮೃತ ಬಾಲಕಿ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ಘೋಷಿಸಿದರು.
ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮೃತ ಬಾಲಕಿ ಕುಟುಂಬದವರಿಗೆ ವೈಯಕ್ತಿಕವಾಗಿ ₹ 2 ಲಕ್ಷ ಮೊತ್ತದ ಚೆಕ್ ವಿತರಿಸಿದರು.ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಡಿಎಫ್ಒ ಗಿರೀಶ್, ಎಎಸ್ಪಿ ಟಿ.ಜೆ.ಉದೇಶ ಮತ್ತಿತರಿದ್ದರು.