ತುಮಕೂರು:‘ಪರಮೇಶ್ವರ ಹಠಾವೋ ಕಾಂಗ್ರೆಸ್ ಬಚಾವೋ’ ಎಂಬ ಭಿತ್ತಿಪತ್ರಗಳನ್ನು ಶನಿವಾರ ನಗರದ ಬಿ.ಎಚ್.ರಸ್ತೆಯ ಕೆಲವು ಕಡೆ ಅಂಟಿಸಲಾಗಿದೆ.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಭಾವಚಿತ್ರ ಭಿತ್ತಿಪತ್ರಗಳಲ್ಲಿ ಇದೆ. ಭಿತ್ತಿಪತ್ರದ ಕೆಳಗೆ ಇಂತಿ ನೊಂದ ಕಾರ್ಯಕರ್ತರು, ತುಮಕೂರು ಜಿಲ್ಲೆ ಎಂದಿದೆ.
ಬಿಜಿಎಸ್ ವೃತ್ತದ ಬಳಿಯ ಗ್ರಂಥಾಲಯದ ಗೋಡೆ, ಸ್ಕೈ ವಾಕ್, ವಾಲ್ಮೀಕಿನಗರದಲ್ಲಿ ಭಿತ್ತಿಪತ್ರಗಳು ಹೆಚ್ಚು ಕಂಡು ಬಂದಿವೆ. ಮಧ್ಯಾಹ್ನದ ನಂತರ ಇವುಗಳನ್ನು ಕಿತ್ತು ಹಾಕಲಾಗಿದೆ.
ಯಾವ ಶಾಸಕರೂ ಪಕ್ಷ ತೊರೆಯುವುದಿಲ್ಲ
ಶಾಸಕ ರಮೇಶ್ ಜಾರಕಿಹೊಳಿ ಸೇರಿದಂತೆ ಯಾವ ಶಾಸಕರೂ ಕಾಂಗ್ರೆಸ್ ತೊರೆಯುವುದಿಲ್ಲ. ಸರ್ಕಾರಕ್ಕೆ ತೊಂದರೆ ಇಲ್ಲ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ನಗರದಲ್ಲಿ ಸುದ್ದಿಗಾರರಿಗೆ ಡಾ.ಜಿ.ಪರಮೇಶ್ವರ ತಿಳಿಸಿದರು.
ಭಿತ್ತಿ ಪತ್ರ ಅಂಟಿಸಿರುವ ಬಗ್ಗೆ ಪ್ರಶ್ನಿಸಿದಾಗ, ‘ಈ ಬಗ್ಗೆ ಏನೂ ಪ್ರತಿಕ್ರಿಯಿಸುವುದಿಲ್ಲ’ ಎಂದರು.
‘ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡರ ಸೋಲಿನ ಹೊಣೆಯನ್ನು ನಾವೆಲ್ಲ ಹೊರುತ್ತೇವೆ. ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಕುಂಠಿತವಾಗಿರುವುದಕ್ಕೆ ಸ್ವಾಭಾವಿಕವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬೇಸರವಾಗಿದೆ’ ಎಂದು ಹೇಳಿದರು.