ತುರುವೇಕೆರೆ: ಯಾವ ತರಬೇತಿ ಕೇಂದ್ರಗಳಿಗೂ ಹೋಗದೆ ಸ್ವಂತ, ಓದು ಮತ್ತು ಅಧ್ಯಯನದಿಂದ ಕನ್ನಡದಲ್ಲೇ ಕೆಎಎಸ್ ಪರೀಕ್ಷೆ ಉತ್ತೀರ್ಣರಾಗಿ ಕೆಪಿಎಸ್ಸಿಯಲ್ಲಿ ಕಂದಾಯ ಇಲಾಖೆಯ ಸಹಾಯಕ ಆಯುಕ್ತರಾಗಿ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಡಿ.ಹೊಸಹಳ್ಳಿ ಗ್ರಾಮದ ಎಚ್.ಗಂಗಾಧರಯ್ಯ ಆಯ್ಕೆಯಾಗಿದ್ದಾರೆ.
ಎಚ್.ಗಂಗಾಧರಯ್ಯ ರೈತ ಕುಟುಂಬದಿಂದ ಬಂದವರಾಗಿದ್ದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ಅಮ್ಮಸಂದ್ರದ ಮೈಸೆಂಕೋ ಶಾಲೆಯಲ್ಲಿ ಮುಗಿಸಿ ಆನಂತರ ಡಿಪ್ಲಮೊ ಪದವಿಯನ್ನು ತುಮಕೂರಿನಲ್ಲಿ ಪಡೆದರು.
1996ರಲ್ಲಿ ಇಂಡಿಯನ್ ಏರ್ಫೋರ್ಸ್ಗೆ ನೇಮಕವಾಗಿ 20 ವರ್ಷ ಕಾರ್ಯನಿರ್ವಹಿಸಿ 2016ರಲ್ಲಿ ನಿವೃತ್ತಿ ಹೊಂದಿದರು. ನಂತರ ದೂರ ಶಿಕ್ಷಣದ ಮೂಲಕ ಬಿ.ಎ, ಎಂ.ಎ, ಎನ್.ಇ.ಟಿ ಪದವಿ ಪಡೆದರು. ಕೆಲ ದಿನ ವಿಧಾನಸೌಧದಲ್ಲೂ ಸಹಾಯಕರಾಗಿ ಕೆಲಸ ನಿರ್ವಹಿಸಿದರು.
2017ರಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾದರು. ಕೆಎಎಸ್ ಪರೀಕ್ಷೆಗೆ ಕುಳಿತು ಯಾವ ತರಬೇತಿ ಕೇಂದ್ರಗಳಿಗೂ ಹೋಗದೆ ಮನೆಯಲ್ಲೇ ಅಭ್ಯಾಸ ಮಾಡಿದರು. ಇದರ ಫಲಿತಾಂಶ ಬರುವುದು ತಡವಾದ್ದರಿಂದ ಸಬ್ರಿಜಿಸ್ಟ್ರಾರ್ ಹುದ್ದೆಗೆ ಪರೀಕ್ಷೆ ಬರೆದು, ಆಯ್ಕೆಯಾಗಿ ಪ್ರಸ್ತುತ ಪ್ರೋಬೇಷನರಿ ಸಬ್ರಿಜಿಸ್ಟ್ರಾರ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.