ಕೊರಟಗೆರೆ: ತಾಲ್ಲೂಕಿನ ಕೋಳಾಲ ಗ್ರಾಮದ ರೈತ ಗಿರೀಶ್ ಪಾಲಿಹೌಸ್ನಲ್ಲಿ ಬೆಳೆದಿರುವ ಜರ್ಬೆರಾ, ಕಾರ್ನೇಷನ್ ಹೂವುಗಳಿಗೆ ಮಾರುಕಟ್ಟೆ ದೊರೆಯದೆ ತಿಪ್ಪೆಗೆ ಎಸೆಯುತ್ತಿದ್ದಾರೆ.
8 ಎಕರೆ ಜಮೀನಿನಲ್ಲಿ ಪಾಲಿಹೌಸ್ ನಿರ್ಮಿಸಿ 2 ಎಕರೆಯಲ್ಲಿ ಜರ್ಬೇರಾ, 6 ಎಕರೆಯಲ್ಲಿ ಕಾರ್ನೇಷನ್ ಹೂವು ಬೆಳೆದಿದ್ದಾರೆ. ಶುಭ ಸಮಾರಂಭಗಳಲ್ಲಿ ವೇದಿಕೆ ಅಲಂಕಾರಕ್ಕೆ ಈ ಹೂವು ಬಳಸಲಾಗುತ್ತದೆ. ಹೊರ ರಾಜ್ಯಗಳಲ್ಲೂ ಈ ಹೂವುಗಳಿಗೆ ಬೇಡಿಕೆ ಇತ್ತು.
‘ಲಾಕ್ಡೌನ್ನಿಂದಾಗಿ ಎರಡು ತಿಂಗಳಿಂದ ಬೆಳೆದ ಹೂವುಗಳಿಗೆ ಮಾರುಕಟ್ಟೆ ಇಲ್ಲದೆ ತಿಪ್ಪೆಗೆ ಎಸೆದಿದ್ದೇವೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸರ್ಕಾರ ಎಕರೆಗೆ ಕೇವಲ ₹10 ಸಾವಿರ ಪರಿಹಾರ ಘೋಷಿಸಿದೆ. ಕೂಲಿ ವೆಚ್ಚವೂ ಸಿಗುವುದಿಲ್ಲ.ಕೃಷಿಗೆ ಮಾಡಿರುವ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ’ ಎಂದು ಗಿರೀಶ್ ಅಳಲು ತೋಡಿಕೊಂಡರು.
‘ಲಾಕ್ಡೌನ್ ವೇಳೆ ತಾಲ್ಲೂಕು ಆಡಳಿತ ಹೂವು ಮಾರಲು ಅನುಮತಿ ನೀಡಲಿಲ್ಲ. ತಹಶೀಲ್ದಾರ್, ಜಿಲ್ಲಾಧಿಕಾರಿಗೂ ನೆರವು ಕೋರಿದ್ದೆ. ಎಲ್ಲರೂ ಕೈಚೆಲ್ಲಿದ್ದರು’ ಎಂದರು.
***
ಬೆಳೆ ನಷ್ಟದ ಬಗ್ಗೆ ತೋಟಗಾರಿಕೆ ಇಲಾಖೆ ಗಮನಕ್ಕೆ ತಂದರೂ, ಅಧಿಕಾರಿಗಳು ಬಂದು ನೋಡಿಲ್ಲ. ಅವರಿಗೆ ಪುಷ್ಪ ಕೃಷಿಯ ಮಾಹಿತಿಯೇ ಇಲ್ಲ. ಏನೇ ಕೇಳಿದರೂ ಹಾರಿಕೆ ಉತ್ತರ ನೀಡುತ್ತಾರೆ ಗಿರೀಶ್, ಪುಷ್ಪ ಕೃಷಿಕ