ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯ ಅಪಾರ್ಟ್ಮೆಂಟೊಂದರಲ್ಲಿ ಪತ್ತೆಯಾದ 9746 ಮತದಾರ ಗುರುತಿನ ಚೀಟಿಗಳ ಕುರಿತು ತನಿಖೆ ಮುಂದುವರಿದಿದೆ.
ಎಸ್ಎಲ್ವಿ ಪಾರ್ಕ್ ವ್ಯೂ ಅಪಾರ್ಟ್ಮೆಂಟ್ನ ಫ್ಲಾಟ್ ನಂ.115ರಲ್ಲಿ ಸಂಗ್ರಹಿಸಲಾಗಿದ್ದ ಪ್ರಿಂಟರ್ಗಳನ್ನು ಬುಧವಾರ ಚುನಾವಣಾ ಆಯೋಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮತದಾರ ಗುರುತಿನ ಚೀಟಿ ಪತ್ತೆಯಾಗಿರುವ ಬೆನ್ನಲೇ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಆರೋಪ– ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.
ತನಿಖೆ ಚುನಾವಣಾ ಆಯೋಗದ ಕೆಲಸ
'ತನಿಖೆ ನಡೆಸುವುದು ಚುನಾವಣಾ ಆಯೋಗದ ಕಾರ್ಯ. ಆ ಸಂಬಂಧ ನಾನು ಯಾವುದೇ ಪ್ರಕ್ರಿಯೆ ನೀಡಬೇಕಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಸರ್ಕಾರ ಕಾಂಗ್ರೆಸ್ ಮೇಲೆ ನಿರಂತರ ನಿಗಾವಹಿಸಿದೆ. ನಾನು 12ನೇ ಬಾರಿ ಚುನಾವಣೆ ಎದುರಿಸುತ್ತಿದ್ದೇನೆ. ಆದರೆ, ಇದೇ ಮೊದಲ ಬಾರಿಗೆ ಚುನಾವಣೆ ಸಮಯದಲ್ಲಿ ಐಟಿ ದಾಳಿ ನಡೆಯುತ್ತಿದೆ. ಸರ್ಕಾರದ ಸಂಸ್ಥೆಗಳನ್ನು ಅವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆರೋಪ ಮಾಡಿದರು.
ಬಾಡಿಗೆ ಕೊಟ್ಟಿದ್ದು ರಂಗರಾಜುಗೆ...
ರಂಗರಾಜು ಅವರಿಗೆ ಫ್ಲಾಟ್ ಬಾಡಿಗೆ ನೀಡಲಾಗಿದ್ದು, ಅವರೇ ಪ್ರತಿ ತಿಂಗಳು ಬಾಡಿಗೆ ಕಟ್ಟುತ್ತಿದ್ದಾರೆ ಎಂದು ಫ್ಲಾಟ್ ಮಾಲಿಕರಾದ ಮಂಜುಳಾ ನಂಜಮರಿ ಅವರ ಪುತ್ರ ಶ್ರೀಧರ್ ನಂಜಮರಿ ಹೇಳಿದ್ದಾಗಿ ಎಎನ್ಐ ವರದಿ ಮಾಡಿದೆ.
‘ಮಂಜುಳಾ ನಂಜಮರಿ ಅವರಿಗೆ ನಾನೊಬ್ಬನೇ ಮಗ. ರಾಕೇಶ್ ನನ್ನ ತಾಯಿಯ ಸೋದರ ಸಂಬಂಧಿಯ ಪುತ್ರ. ಈ ಫ್ಲಾಟ್ಗೂ ರಾಕೇಶ್ಗೂ ಯಾವುದೇ ಸಂಬಂಧವಿಲ್ಲ’ ಎಂದು ಶ್ರೀಧರ್ ಸ್ಪಷ್ಟಪಡಿಸಿದ್ದಾರೆ.