ಮಧುಗಿರಿ:ಖಾಸಗಿ ಶಾಲೆ ಶಿಕ್ಷಕರಿಗೆ ರಾಜ್ಯ ಸರ್ಕಾರ ಘೋಷಿಸಿರುವ ₹5 ಸಾವಿರ ಪರಿಹಾರವನ್ನು ತಡ ಮಾಡದೇ ಹಾಗೂ ಕಚೇರಿಗೆ ಅಲೆದಾಡಿಸದೇ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಚಿರೆಕ್ ಪಬ್ಲಿಕ್ ಶಾಲೆ ಆವರಣದಲ್ಲಿ ವೈ.ಎ.ನಾರಾಯಣ ಸ್ವಾಮಿ ಹಾಗೂ ಚಿದಾನಂದ ಎಂ.ಗೌಡ ಅಭಿಮಾನಿ ಬಳಗದಿಂದ ಅನುದಾನ ರಹಿತ ಖಾಸಗಿ ಶಾಲೆಯ ಶಿಕ್ಷಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು.
ಕೋವಿಡ್ ಮೂರನೇ ಅಲೆ ಪ್ರಾರಂಭವಾದರೆ ಅನುದಾನ ರಹಿತ ಶಾಲೆ ಶಿಕ್ಷಕರಿಗೆ ತೆಲಂಗಾಣ ಮಾದರಿಯಲ್ಲಿ ಪ್ರತಿ ತಿಂಗಳು ₹5 ಸಾವಿರ ಹಾಗೂ 25 ಕೇ.ಜಿ. ಅಕ್ಕಿ ವಿತರಿಸಲಾಗುವುದು ಎಂದರು.
ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಕಾರ್ಯನಿರತ ಪತ್ರಕರ್ತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಘಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ಖಾಸಗಿ ಶಾಲೆಗಳಿಗೆ ಶಿಕ್ಷಕರೇ ಮುಖ್ಯ ಅಧಾರ ಸ್ತಂಭವಾಗಿದ್ದು, ಅವರನ್ನು ಏಕಾಏಕಿ ಯಾವ ಸಂಸ್ಥೆಯು ಕೆಲಸದಿಂದ ತೆಗೆಯಬಾರದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಡಳಿತ ಮಂಡಳಿ ಠೇವಣಿಯಾಗಿಟ್ಟಿರುವ ಹಣವನ್ನು ಬಳಸಿಕೊಳ್ಳಬೇಕು ಎಂದರು.
ಕೋವಿಡ್ನಿಂದ ಸಂಕಷ್ಟದಲ್ಲಿರುವ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿದರೆ, ಸರ್ಕಾರ ಎಲ್ಲ ಸೌಲಭ್ಯ ನೀಡುವುದರ ಜೊತೆಗೆ ಗುಣಮಟ್ಟದ ಶಿಕ್ಷಣವನ್ನೂ ನೀಡುತ್ತದೆ ಎಂದರು.
ಮಧುಗಿರಿ ತಾಲ್ಲೂಕು ಅಸ್ಪತ್ರೆಗೆ ₹23 ಲಕ್ಷ ವೆಚ್ಚದ ಐಸಿಯು, ಸಂಚಾರಿ ಆಂಬುಲೆನ್ಸ್ ನೀಡುವುದಾಗಿ ತಿಳಿಸಿದರು.
ತಾಲ್ಲೂಕಿನ ಖಾಸಗಿ ಶಾಲೆಯ 719 ಶಿಕ್ಷಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು.
ಚಿರಕ್ ಶಾಲೆ ಅಧ್ಯಕ್ಷ ಭಾಸ್ಕರ್ ರೆಡ್ಡಿ, ಬಿಇಒ ನರಸಿಂಹಯ್ಯ, ಶಿಕ್ಷಣಾಧಿಕಾರಿ ಸಿದ್ದೇಶ್ವರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಎಲ್. ನರಸಿಂಹಮೂರ್ತಿ, ಪ್ರೌಡಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವೆಂಕಟರಾಮು, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್, ರೋಟರಿ ಕ್ಲಬ್ ಅಧ್ಯಕ್ಷ ಎಂ.ಶಿವಲಿಂಗಪ್ಪ, ನಿವೃತ್ತ ಮುಖ್ಯ ಶಿಕ್ಷಕ ಧನಂಜಯ ಪಟೇಲ್, ಶಿಕ್ಷಕ ಕೆಂಪಯ್ಯ, ಶಾಸಗಿ ಶಾಲೆ ಮುಖ್ಯಸ್ಥ ಟಿ.ರಾಮಣ್ಣ, ಡಾ.ಜಿ.ಕೆ.ಜೈರಾಮ್, ಎಂ.ಎಸ್.ಶಂಕರನಾರಾಯಣ, ಜಗದೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.