ಚೇಳೂರು: ಅಪಘಾತ ಸಂಭವಿಸಿ ಗಂಟೆಗಳೇ ಕಳೆದರೂ ಯಾರೊಬ್ಬರ ಸಹಾಯವಿಲ್ಲದೆ ರಸ್ತೆ ಬದಿಯಲ್ಲಿ ಬಿದ್ದು ನರಳಾಡುತ್ತಿದ್ದ ಅಂಗವಿಕಲ ವ್ಯಕ್ತಿಯನ್ನು ತಹಶೀಲ್ದಾರ್ ಮಮತಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ರಸ್ತೆ ಮಾರ್ಗವಾಗಿ ತುರ್ತು ಕಾರ್ಯ ನಿಮಿತ್ತ ತೆರಳುತ್ತಿದ್ದ ಗುಬ್ಬಿ ತಹಶೀಲ್ದಾರ್ ಮಮತಾ ಅವರು ರಸ್ತೆ ಬದಿಯಲ್ಲಿ ಅಪಘಾತದಿಂದ ಗಾಯಗೊಂಡು ನರಳಾಡುತ್ತಿದ್ದ ವ್ಯಕ್ತಿಯನ್ನು ಸ್ವತಃ ತಮ್ಮ ಕಾರಿನಲ್ಲಿ ಕರೆದೊಯ್ದು ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಾರ್ವಜನಿಕ ಸೇವೆಯಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತ ನಿರಂತರ ಜನರ ಸಂಪರ್ಕಕ್ಕೆ ಸಿಗುತ್ತಿರುವ ಮಮತಾ ಅವರು ಯಾವುದೇ ಸಮಸ್ಯೆಯನ್ನು ಖುದ್ದು ಭೇಟಿ ಮಾಡಿ ಪರಿಹಾರ ನೀಡುವ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ.
‘ಇವರಂತೆ ಎಲ್ಲ ಸರ್ಕಾರಿ ನೌಕರರು ತಮ್ಮ ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಿದರೆ ಸಾಮಾನ್ಯ ವ್ಯಕ್ತಿವೆರೆಗೂ ನ್ಯಾಯ ಸಿಕ್ಕೇ ಸಿಗುತ್ತದೆ’ ಎನ್ನುವರು ಚೇಳೂರು ಗ್ರಾಮಸ್ಥ ಸೋಮಶೇಖರ್.