ಗುಬ್ಬಿ: ತಾಲ್ಲೂಕಿನಾದ್ಯಂತ ಲಾಕ್ಡೌನ್ ಜಾರಿ ಮಾಡಿ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ತಾಲ್ಲೂಕು ಕಚೇರಿಯ ಕಂದಾಯ ಭವನದಲ್ಲಿ ನಡೆದ ಕೋವಿಡ್-19 ಜಾಗೃತಿ ಸಭೆಯಲ್ಲಿ ಮಾತನಾಡಿದರು.
ದಿನ ನಿತ್ಯದಂತೆ ಜನಜಂಗುಳಿ ಇರುವುದನ್ನು ಗಮನಿಸಿದ್ದೇನೆ. ಲಾಕ್ ಡೌನ್ ಕ್ರಮವನ್ನು ಯಾರೊಬ್ಬರು ಹಗುರವಾಗಿ ತೆಗದುಕೊಳ್ಳಬಾರದು. ಹಾಗೇನಾದರು ಅಸಡ್ಡೆ ತೋರಿದರೆ ನಿರ್ದಾಕ್ಷಿಣ್ಯ ಕ್ರಮತೆಗೆದುಕೊಳ್ಳಿ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಜೂಜಾಟ ಮತ್ತು ಅಕ್ರಮ ಮದ್ಯ ಮಾರಾಟ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರಿಂದ ಕರೆಗಳು ಬರುತ್ತಿವೆ. ಅಕ್ರಮ ಮದ್ಯ ಮಾರಾಟ ಮಾಡುವ ಲಿಕ್ಕರ್ ಮತ್ತು ಜೂಜು ಅಡ್ಡೆಗಳ ಸುತ್ತ ಗಸ್ತು ನಡೆಸಿ ದಾಳಿ ಮಾಡಿ ಪ್ರಕರಣ ದಾಖಲಿಸುವ ಜತೆಗೆ ಶಿರಾ ಮಾರ್ಗದಿಂದ ಗುಬ್ಬಿಗೆ ಇರುವ ಸಂಚಾರ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಿ ಎಂದು ತಿಳಿಸಿದರು.
ಪಡಿತರ ಚೀಟಿದಾರರಿಗೆ ಬಯೋಮೆಟ್ರಿಕ್ ಅಥವಾ ಒಟಿಪಿಗಾಗಿ ಕಾಯಿಸದೇ ಸಹಿ ಪಡೆದುಕೊಂಡು ಹಾಗೂ ಪಡಿತರ ಚೀಟಿ ಇಲ್ಲದಿದ್ದರೂ ಏಪ್ರಿಲ್ 10ರೊಳಗೆ ಪಡಿತರ ವಿತರಿಸಿ ಎಂದರು.
ಜಿ.ಪಂ.ಸದಸ್ಯೆ ಡಾ.ನವ್ಯಾಬಾಬು ಮತ್ತು ಗ್ರೀನ್ ಹುಡ್ ಇಂಟರ್ ನ್ಯಾಷನಲ್ ಸ್ಕೂಲ್ ಮಾಲೀಕ ಚಂದ್ರಶೇಖರ್ ಬಾಬು ಸೇರಿ ಒಂದು ಲಕ್ಷ ಹಾಗೂ ಟಿಎಪಿಸಿಎಂಎಸ್ ವತಿಯಿಂದ ₹50 ಸಾವಿರ, ಎಸ್ಎಂಬಿ ಟ್ರೇಡರ್ಸ್ನಿಂದ ₹ 10 ಸಾವಿರ ಚೆಕ್ಕನ್ನು ಮುಖ್ಯಮಂತ್ರಿ ನಿಧಿಗೆ ನೀಡಿದರು.
ಸಭೆಯಲ್ಲಿ ಉಪ ವಿಭಾಗ ಅಧಿಕಾರಿ ಅಜೆಯ್, ಡಿಎಚ್ಒ ಚಂದ್ರಿಕಾ, ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್ ಹಿರೇಮಠ್, ಇ.ಒ ನರಸಿಂಹಯ್ಯ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳು ಹಾಜರಿದ್ದರು.