ತುಮಕೂರು: ಅನನ್ಯ ಪ್ರಕಾಶನವು ನೀಡುವ 2017ನೇ ಸಾಲಿನ ದಿ.ಕೆ.ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿಗೆ ಯುವಲೇಖಕ ಚಿಕ್ಕನಾಯಕನಹಳ್ಳಿಯ ಗುರುಪ್ರಸಾದ್ ಕಂಟಲಗೆರೆ ಅವರ ‘ಗೋವಿನ ಹಾಡು’ ಕಥಾ ಸಂಕಲನ ಆಯ್ಕೆಯಾಗಿದೆ.
ಪ್ರಶಸ್ತಿಯು ₹ 5 ಸಾವಿರ ನಗದು, ಪುರಸ್ಕಾರ, ಸ್ಮರಣಿಕೆ ಒಳಗೊಂಡಿರುತ್ತದೆ. ರಾಜ್ಯದ ವಿವಿಧ ಲೇಖಕರ ಕೃತಿಗಳು ಪ್ರಶಸ್ತಿಗೆ ಬಂದಿದ್ದವು. ಚ.ಹ.ರಘುನಾಥ್ ಹಾಗೂ ನಿರ್ಮಲ ಎಲಿಗಾರ್ ಅವರ ಆಯ್ಕೆ ಸಮಿತಿ ‘ಗೋವಿನ ಹಾಡು’ ಕಥಾ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
‘ಡಿ.25 ರಂದು ತುಮಕೂರಿನ ಸಿದ್ಧಗಂಗಾ ಮಹಿಳಾ ಕಾಲೇಜಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಅನನ್ಯ ಪ್ರಕಾಶನದ ಅಧ್ಯಕ್ಷೆ ಎಂ.ಸಿ.ಲಲಿತಾ ತಿಳಿಸಿದ್ದಾರೆ.