ತುಮಕೂರು: ಬಾಕಿ ಇರುವ ಜಿಲ್ಲೆಯ ಪಾಲಿನ ಹೇಮಾವತಿ ನೀರನ್ನು ಕೂಡಲೇ ಹರಿಸಲು ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಬಿ.ಸುರೇಶ ಗೌಡ ಕೋರಿದರು.
ತಾಲ್ಲೂಕಿನ ನಾಗವಲ್ಲಿ ಗ್ರಾಮದಲ್ಲಿ ಪಡಿತರ ಕಿಟ್ ವಿತರಿಸಿ ಮಾತನಾಡಿದ ಅವರು, ‘ಗೊರೂರು ಜಲಾಶಯದಲ್ಲಿ ಇನ್ನೂ 7 ಟಿಎಂಸಿ ಅಡಿ ನೀರಿನ ಸಂಗ್ರಹ ಇದೆ. ಇದು ತುಮಕೂರು ಪಾಲಿನ ನೀರು ಆಗಿದೆ. ಈ ನೀರನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಅಷ್ಟೇ ಅಲ್ಲದೇ ಅಂತರ್ಜಲದ ಕುಸಿತದ ಕಾರಣ ರೈತರು ಬೀದಿಗೆ ಬೀಳುತ್ತಿದ್ದಾರೆ. ಹೀಗಾಗಿ ತುಮಕೂರು ಪಾಲಿನ ನೀರನ್ನು ಕೂಡಲೇ ಹರಿಸಬೇಕು. ಈ ಸಂಬಂಧ ಮಾಧುಸ್ವಾಮಿ ಅವರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಜಲಾಶಯದಲ್ಲಿ ನೀರಿದ್ದರೂ ತುಮಕೂರು ಗ್ರಾಮಾಂತರ ಕ್ಷೇತ್ರದ ಕೆರೆಗಳನ್ನು ತುಂಬಿಸಿಕೊಳ್ಳುವಲ್ಲಿ ಶಾಸಕ ಬಿ.ಸಿ.ಗೌರಿಶಂಕರ್ ವಿಫಲರಾದರು. ಸರ್ಕಾರದ ಮೇಲೆ ಒತ್ತಡ ತರುವ ಬದಲಿಗೆ ಮೌನವಹಿಸಿದರು. ಇದರಿಂದಾಗಿ ಗ್ರಾಮಾಂತರ ಕ್ಷೇತ್ರದ ಕೆರೆಗಳು ಒಣಗಿವೆ. ಪ್ರಾಣಿ ಪಕ್ಷಗಳಿಗೆ ಹನಿ ನೀರು ಇಲ್ಲ ಎಂದು ಹೇಳಿದರು.
ಜಿ.ಪಂ.ಸದಸ್ಯೆ ಅನಿತಾ, ಗ್ರಾ.ಪಂ.ಅಧ್ಯಕ್ಷೆ ಪಾರ್ವತಮ್ಮ,ಉಪಾಧ್ಯಕ್ಷೆ ಮಂಜುಳಾ, ಸದಸ್ಯ ರಮೇಶ್, ಮಾಜಿ ಅಧ್ಯಕ್ಷ ನಾಗಣ್ಣ ಇದ್ದರು.