ತುಮಕೂರು: ತುಮಕೂರಿನ ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಕೀಲು ಮತ್ತು ಮೂಳೆ ವಿಭಾಗದ ವೈದ್ಯರು 65 ವರ್ಷದ ವೃದ್ಧೆಗೆ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿ ಸ್ವಾವಲಂಬಿಯಾಗಿ ನಡೆದಾಡುವಂತೆ ಮಾಡಿದ್ದಾರೆ.
ತುಮಕೂರಿನ ಮಂಜುನಾಥ್ ವರ ತಾಯಿ ಸಿದ್ದಗಂಗಮ್ಮ (65) ಎಂಬುವವರು ಕಾಲು ಮತ್ತು ಮಂಡಿ ನೋವಿನಿಂದ ಬಳಲುತ್ತಿದ್ದರು. ಇತರರ ಸಹಾಯದಿಂದ ನಡೆದಾಡುತ್ತಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ತಾವೇ ನಡೆದಾಡುವಂತಾಗಿದ್ದಾರೆ.
‘ವೈದ್ಯರ ತಂಡ ರೋಗಿಯ ಪರೀಕ್ಷೆ ಮಾಡಿ ಸಾಮಾನ್ಯ ಶಸ್ತ್ರಚಿಕಿತ್ಸೆಗೆ ಗುಣವಾಗುವುದು ಕಷ್ಟವಾಗಿರುವುದರಿಂದ ಮಂಡಿ ಮರುಜೋಡಣೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅತಿ ಕಡಿಮೆ ಅವಧಿಯಲ್ಲಿ ರೋಗಿ ತಾವೇ ನಡೆದಾಡುವಂತಾಗಿದ್ದಾರೆ’ ಎಂದು ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಕೀಲು ಮತ್ತು ಮೂಳೆ ವಿಭಾಗದ ತಜ್ಞ ಡಾ.ಅಬ್ದುಲ್ ಖಾದರ್ ತಿಳಿಸಿದರು.
ಆಸ್ಪತ್ರೆ ತಜ್ಞ ವೈದ್ಯರಾದ ಡಾ.ಅಕ್ಬರ್ ಇಕ್ರಂ ಅಹಮ್ಮದ್, ಡಾ.ಅಬ್ದುಲ್ ಖಾದರ್, ಡಾ.ಕೆ.ಆರ್.ರಾಧೇಶ್ ಹಾಗೂ ಅನುಭವಿ ವೈದ್ಯರ ತಂಡ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು.