ತುಮಕೂರು: ’ರಾಮಾಯಣ ಮಹಾಕಾವ್ಯ ನೀಡಿದ ಮಹರ್ಷಿ ವಾಲ್ಮೀಕಿ ಅವರು ಇಡೀ ಜಗತ್ತಿಗೆ ಆದರ್ಶರಾಗಿದ್ದಾರೆ’ಎಂದು ಕೆಎಸ್ಆರ್ಟಿಸಿ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎನ್.ಗಜೇಂದ್ರಕುಮಾರ್ ಹೇಳಿದರು.
ಭಾನುವಾರ ನಗರದ ಅಂತರಸನಹಳ್ಳಿಯ ಕೆಎಸ್ಆರ್ಟಿಸಿ 2ನೇ ಘಟಕದಲ್ಲಿ ಆಯೋಜಿಸಿದ್ಧ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
’ಮಹರ್ಷಿ ವಾಲ್ಮೀಕಿ ಅವರು ಬರೆದ ಕಾವ್ಯದಲ್ಲಿ ಬರುವ ಒಂದೊಂದು ಪಾತ್ರಗಳು ಆದರ್ಶದ ಗುಣಗಳನ್ನು ಹೊಂದಿವೆ. ಯುವಕರು ಕಾವ್ಯ ತಿರುಳು ಅರ್ಥೈಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ’ ಎಂದರು.
’ಮನುಷ್ಯನಲ್ಲಿ ರಾಮ ಮತ್ತು ರಾವಣ ಇಬ್ಬರ ಗುಣಗಳೂ ಇವೆ. ರಾಮನ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ನನಸು ಮಾಡಬೇಕು’ ಎಂದು ಹೇಳಿದರು.
ವಿಭಾಗೀಯ ಸಂಚಾಲನಾಧಿಕಾರಿ ಫಕ್ರುದ್ದೀನ್ ಮಾತನಾಡಿ, ‘ಬೇಟೆಗಾರರ ಬಾಣಕ್ಕೆ ಗುರಿಯಾದ ತನ್ನ ಸಂಗಾತಿಯನ್ನು ಕಂಡು ರೋದಿಸುವ ಕ್ರೌಂಚ ಪಕ್ಷಿಯನ್ನು ಕಂಡ ವಾಲ್ಮೀಕಿಯವರ ಮನಕರಗಿ ಅಂತಃಕರಣಿಗಳಾಗುತ್ತಾರೆ. ನಂತರ ರಾಜ್ಯಾಧಿಕಾರದ ಮಾರ್ಗದರ್ಶನ ನೀಡುವ ರಾಮಾಯಣ ಮಹಾಕಾವ್ಯ ನೀಡಿದರು’ ಎಂದು ವಿವರಿಸಿದರು.
ಕೆಎಸ್ಆರ್ಟಿಸಿ ನೆಲಮಂಗ ಡಿಪೋ ವ್ಯವಸ್ಥಾಪಕ ಮಂಜುನಾಥ್, ಕೆ.ಎಸ್.ಆರ್.ಟಿ.ಸಿ. ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವಿ.ಡಿ.ಹನುಮಂತರಾಯ ಮಾತನಾಡಿದರು.
ವಸಂತನರಸಾಪುರದ ಹತ್ತಿರದ ಲಿಂಗನಹಳ್ಳಿ ಗ್ರಾಮದ ಕಲಾವಿದರು ರಾಮಾಯಣ ಕಾವ್ಯದ ವಿವಿಧ ಪಾತ್ರಗಳ ಪೋಷಾಕಿನಲ್ಲಿ ಗಮನ ಸೆಳೆದರು. ಘಟಕ ವ್ಯವಸ್ಥಾಪಕ ಎಸ್.ಆರ್.ಸಂತೋಷ್, ಹಂಸವೇಣಿ, ಸಿದ್ದರಾಜು, ಕುಮಾರ್, ಮಂಜುನಾಥ್ ಹಾಗೂ ಸಿಬ್ಬಂದಿ ಇದ್ದರು.