ಕೋರ: ಹೋಬಳಿಯ ಹಿರೇತೊಟ್ಲುಕೆರೆ ಹಾಗೂ ಅಕ್ಕಪಕ್ಕದ ಹಳ್ಳಿಗಳಲ್ಲಿ ಮೇಕೆ ಹಾಗೂ ಹಸು ಕಳವು ಪ್ರಕರಣ ಹೆಚ್ಚಾಗುತ್ತಿದ್ದು, ರೈತರು ಆತಂಕಗೊಂಡಿದ್ದಾರೆ.
ರೈತರು ಜೀವನೋಪಾಯಕ್ಕಾಗಿ ಮೇಕೆ ಹಾಗೂ ಹಸು ಸಾಕಣೆ ಮಾಡುತ್ತಿದ್ದು, ಕಳ್ಳರ ಹಾವಳಿಯಿಂದ ಸಾಕಿರುವ ಪ್ರಾಣಿಗಳನ್ನು ಕಾಯುವುದೇ ದೊಡ್ಡ ಸವಾಲಾಗಿದೆ.
ಕೆಲವು ದಿನಗಳ ಹಿಂದೆ ಹಿರೇತೊಟ್ಲುಕೆರೆ ದಿಣ್ಣೆಯ ರಸ್ತೆಬದಿಯಿರುವ ಕೊಟ್ಟಿಗೆಯ ಬೀಗ ಮುರಿದು ₹ 10 ಸಾವಿರ ಬೆಲೆ ಬಾಳುವ ಮೇಕೆ ಕಳವು ಮಾಡಿದ್ದಾರೆ. ಅದೇ ದಿನ ಹಿರೇತೊಟ್ಲುಕೆರೆ ಗ್ರಾಮದಲ್ಲಿ ಎರಡು ಮೇಕೆ ಕಳವು ಮಾಡಿದ್ದಾರೆ. ಕುಚ್ಚಂಗಿ ಗ್ರಾಮದ ಬಳಿ 20 ಕೋಳಿ ಹಾಗೂ ಮೇಕೆ ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಘಟನೆ ನಡೆದ ಬಳಿಕ ಹಿರೇಗುಂಡಗಲ್ ಗ್ರಾಮದ ಬಳಿ ಕೊಟ್ಟಿಗೆ ಬೀಗ ಮುರಿದು ಸೀಮೆ ಹಸು ಕಳವಿಗೆ ಯತ್ನಿಸಲಾಗಿದೆ.
‘ವರ್ಷಗಟ್ಟಲೆ ಶ್ರಮ ಹಾಕಿ ರೈತರು ಸಾಕಿದ ಮೇಕೆ, ಕೋಳಿ, ಹಸುಗಳು ಕಳ್ಳರ ಪಾಲಾಗುತ್ತಿವೆ. ಇದರಿಂದ ರೈತರು ಭಯಭೀತರಾಗಿದ್ದಾರೆ. ಪೊಲೀಸ್ ಬೀಟ್ ವ್ಯವಸ್ಥೆ ಬಲಗೊಳಿಸಬೇಕು’ ಎಂದು ಗ್ರಾಮ ಪಂಚಾಯಿತಿಮಾಜಿ ಅಧ್ಯಕ್ಷ ಚಂದ್ರಶೇಖರ್ ಒತ್ತಾಯಿಸಿದ್ದಾರೆ.