ಶಿರಾ: ಗುಟ್ಕಾ ಹಾಗೂ ಮದ್ಯ ಸೇವನೆಯಿಂದ ಯುವಜನತೆ ಹೆಚ್ಚಾಗಿ ಬಾಯಿ ಕ್ಯಾನ್ಸರ್ಗೆ ತುತ್ತಾಗುತ್ತಿದೆ ಎಂದು ದಂತ ವೈದ್ಯ ಡಾ.ಮಂಜುನಾಥ್ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಕ್ಯಾನ್ಸರ್ ಅರಿವು ಹಾಗೂ ಉಚಿತ ದಂತ ಚಿಕಿತ್ಸೆ ಹಾಗೂ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಹಿಂದೆ ತಂಬಾಕು ಸೇವನೆಯಿಂದ ವಯೋವೃದ್ಧರು ಬಾಯಿ ಕ್ಯಾನ್ಸರ್ಗೆ ಗುರಿಯಾಗುತ್ತಿದ್ದರು. ಆದರೆ ಇಂದು ವೃದ್ಧರಿಗಿಂತ ಯುವಕರಲ್ಲೇ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಈ ಬಗ್ಗೆ ಯುವಕರು ಜಾಗೃತರಾಗುವ ಮೂಲಕ ಗುಟ್ಕಾ ಮತ್ತು ಮದ್ಯದಿಂದ ದೂರವಿರಬೇಕು ಎಂದರು.
ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞ ಡಾ.ಡಿ.ಎಂ.ಗೌಡ ಮಾತನಾಡಿ, ‘ಪ್ರಾಥಮಿಕ ಹಂತದಲ್ಲಿ ಕ್ಯಾನ್ಸರ್ ಗುರ್ತಿಸಿ ಸೂಕ್ತ ಚಿಕಿತ್ಸೆ ನೀಡಿದರೆ ಕ್ಯಾನ್ಸರ್ ಗುಣಪಡಿಸಬಹುದು. ವಾಯು ಮಾಲಿನ್ಯದಿಂದಾಗಿ ಕ್ಯಾನ್ಸರ್ ಹೆಚ್ಚಾಗುವಂತಾಗಿದೆ. ಉತ್ತಮ ಪರಿಸರ ನಿರ್ಮಾಣದಿಂದ ಕ್ಯಾನ್ಸರ್ ರೋಗದಿಂದ ಮುಕ್ತರಾಗಬಹುದು’ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಅಫ್ಜಲ್ ಉರ್ ರೆಹಮಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಾಥ್, ಸಿದ್ದಾರ್ಥ ವೈದ್ಯಕೀಯ ವಿದ್ಯಾಲಯ ಹಾಗೂ ಸಂಶೋಧನ ಸಂಸ್ಥೆಯ ಡಾ.ನವೀನ್, ವಿಜಯಲಕ್ಷ್ಮಿ, ಡಾ.ರಾಘವೇಂದ್ರ, ಡಾ.ಸಲ್ಮಾ ಇದ್ದರು.